ತೌಕ್ತೇ ಚಂಡಮಾರುತ ಹೊಡೆತಕ್ಕೆ ಮುಳುಗಿದ ಬಾರ್ಜ್; ಎರಡು ದಿನದ ಬಳಿಕ 22 ಶವ ಪತ್ತೆ
ನಾವು ಇನ್ನೂ ಭರವಸೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Team Udayavani, May 19, 2021, 1:50 PM IST
ಮುಂಬಯಿ: ತೌಕ್ತೇ ಚಂಡಮಾರುತದ ಅಬ್ಬರದಿಂದ ಅರಬ್ಬಿ ಸಮುದ್ರದಲ್ಲಿ ಸಿಲುಕಿರುವ ಪಿ305 ಬಾರ್ಜ್ ನಲ್ಲಿದ್ದವರ ಪೈಕಿ 89 ಜನರು ನಾಪತ್ತೆಯಾಗಿದ್ದು, ಶೋಧಕಾರ್ಯಾಚರಣೆಯಲ್ಲಿ 22 ಜನರ ಶವ ಸಿಕ್ಕಿದ್ದು, ಮುಂಬಯಿ ಡಾಕ್ ಯಾರ್ಡ್ ಗೆ ತರಲಾಗಿದೆ ಎಂದು ವರದಿ ತಿಳಿಸಿದೆ.
ಮುಂಬಯಿ ಕರಾವಳಿ ಪ್ರದೇಶದಲ್ಲಿ 35 ನಾಟಿಕಲ್ ಮೈಲ್ ದೂರದಲ್ಲಿ ಪಿ305 ಬಾರ್ಜ್ ತೌಕ್ತೆ ಚಂಡಮಾರುತದ ಹೊಡೆತಕ್ಕೆ ಸಿಲುಕಿದ್ದು, ನೌಕಾಪಡೆ, ಹೆಲಿಕಾಪ್ಟರ್ ಕಾರ್ಯಾಚರಣೆ ಮೂಲಕ 185 ಜನರನ್ನು ರಕ್ಷಿಸಲಾಗಿತ್ತು. ಆದರೆ ಉಳಿದ 89 ಮಂದಿ ನಾಪತ್ತೆಯಾಗಿದ್ದು, ಶೋಧಕಾರ್ಯಾಚರಣೆ ಮುಂದುವರಿಸಲಾಗಿತ್ತು ಎಂದು ವರದಿ ವಿವರಿಸಿದೆ.
ಕಮಾಂಡರ್ ಆಪರೇಷನ್ಸ್ ನ ನೇವಲ್ ಕಮಾಂಡ್ ಎಂ.ಕೆ. ಜಾ ಅವರು ಸಾವಿನ ಸಂಖ್ಯೆಯನ್ನು ಖಚಿತಪಡಿಸಿದ್ದಾರೆ. ಅಲ್ಲದೇ ಸಾವನ್ನಪ್ಪಿದವರ ಗುರುತು ಪತ್ತೆಹಚ್ಚುವ ಕಾರ್ಯ ನಡೆಯಬೇಕಾಗಿದೆ. ಅಷ್ಟೇ ಅಲ್ಲ ಎಲ್ಲಾ ಸಾವು ಪ್ರಕರಣ ಪಿ.305 ಬಾರ್ನ್ ನ ಸಿಬ್ಬಂದಿಗಳಿಗೆ ಸಂಬಂಧಿಸಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಬೇಕಾಗಿದೆ ಎಂದು ತಿಳಿಸಿದ್ದಾರೆ.
ಪಿ305 ಬಾರ್ಜ್ ನಲ್ಲಿ 273 ಮಂದಿ ಇದ್ದಿದ್ದು, ಅದರಲ್ಲಿ ಹವಾಮಾನ ವೈಪರೀತ್ಯದ ನಡುವೆಯೂ 184 ಜನರನ್ನು ರಕ್ಷಿಸಲಾಗಿತ್ತು. ಅಲ್ಲದೇ ಶೋಧ ಮತ್ತು ರಕ್ಷಣಾ ಕಾರ್ಯ ಎರಡು ದಿನಗಳ ನಂತರವೂ ಮುಂದುವರಿದಿದೆ. ನಾವು ಇನ್ನೂ ಭರವಸೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.