ಮುಂದುವರಿದ ವರುಣನ ಅವಾಂತರ: ಕರ್ನಾಟಕ ಸೇರಿ 20 ರಾಜ್ಯಗಳಲ್ಲಿ ಇನ್ನೂ 2 ದಿನ ಭಾರೀ ಮಳೆ
Team Udayavani, Jul 18, 2022, 12:20 AM IST
ಒಡಿಶಾದ ನಾಗವಲಿ ನದಿಯ ಪ್ರವಾಹದಲ್ಲಿ ಸಿಲುಕಿಕೊಂಡವರ ರಕ್ಷಣೆ.
ಹೊಸದಿಲ್ಲಿ: ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್, ಹಿಮಾಚಲ ಪ್ರದೇಶ, ತೆಲಂಗಾಣ, ಉತ್ತರಾಖಂಡ, ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ವರುಣನ ಅಬ್ಬರ ಮುಂದುವರಿದಿದೆ.
ಮುಂದಿನ 2 ದಿನಗಳ ಕಾಲ ಛತ್ತೀಸ್ಗಡ, ಕರ್ನಾಟಕ, ರಾಜಸ್ಥಾನ, ತಮಿಳುನಾಡು, ಪುದುಚೇರಿ ಸೇರಿದಂತೆ 20 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕೇರಳದಲ್ಲಿ ನಿರಂತರ ಮಳೆಯಾಗುತ್ತಿರುವ ಕಾರಣ, ಮುಲ್ಲಪೆರಿಯಾರ್, ಇಡುಕ್ಕಿ ಸೇರಿದಂತೆ ಅನೇಕ ಅಣೆಕಟ್ಟು ಗಳಲ್ಲಿ ನೀರು ಗರಿಷ್ಠ ಮಟ್ಟಕ್ಕೆ ತಲುಪಿವೆ.
40 ಯಾತ್ರಿಕರ ರಕ್ಷಣೆ: ಕೈಲಾಸ ಮಾನಸ ಸರೋವರ ರಸ್ತೆ ಸಂಚಾರ ಬಂದ್ ಆದ ಕಾರಣ 36 ಗಂಟೆಗಳ ಕಾಲ ಅಲ್ಲಿ ಸಿಲುಕಿದ್ದ 40 ಯಾತ್ರಿಕರನ್ನು ರವಿವಾರ ಉತ್ತರಾಖಂಡ ಸರಕಾರ ರಕ್ಷಿಸಿದೆ. ರುದ್ರಪ್ರಯಾಗ್ನಲ್ಲಿ ಭೂಕುಸಿತ ಉಂಟಾಗಿದೆ.
104 ಸಾವು: ಮಹಾರಾಷ್ಟ್ರದಲ್ಲಿ ಜೂನ್ 1 ರಿಂದ ಜು.16ರ ವರೆಗೆ ಮಳೆ ಸಂಬಂಧಿ ಅವಘಡಗಳಿಗೆ 104 ಮಂದಿ ಬಲಿಯಾಗಿದ್ದಾರೆ.
ಪ್ರವಾಹದ ಹಿಂದೆ ವಿದೇಶಿ ಪಿತೂರಿ!: ತೆಲಂಗಾಣದಲ್ಲಿ ಮೇಘ ಸ್ಫೋಟವಾಗಿ, ಗೋದಾವರಿ ನದಿಯಲ್ಲಿ ದಿಢೀರ್ ಪ್ರವಾಹ ಉಂಟಾಗಿದ್ದರ ಹಿಂದೆ ವಿದೇಶಿ ಪಿತೂರಿ ಕೆಲಸ ಮಾಡಿದೆ ಎಂದು ಸಿಎಂ ಕೆ.ಸಿ. ಚಂದ್ರಶೇಖರ್ ರಾವ್ ಅನುಮಾನ ವ್ಯಕ್ತಪಡಿಸಿದ್ದಾರೆ. “ವಿದೇಶಗಳು ಬೇಕೆಂದೇ ಮೇಘಸ್ಫೋಟ ಮಾಡಿಸುತ್ತವೆ. ಈ ಹಿಂದೆ ಉತ್ತರಾಖಂಡ, ಲೇಹ್ನಲ್ಲಿಯೂ ಇದೇ ರೀತಿ ಮಾಡಲಾಗಿತ್ತು ಎಂದು ಕೇಳಿದ್ದೆ’ ಎಂದಿದ್ದಾರೆ.
ನದಿ ದಂಡೆಯಲ್ಲೇ ಹೆರಿಗೆ!
ಛತ್ತೀಸ್ಗಢದಲ್ಲಿ ಗೃಹರಕ್ಷಕ ದಳದ ತಂಡವೊಂದು ಪ್ರವಾಹಪೀಡಿತ ನದಿಯ ದಂಡೆಯಲ್ಲೇ ಮಹಿಳೆಯೊಬ್ಬರ ಹೆರಿಗೆಗೆ ನೆರವಾಗಿದ್ದಾರೆ. ಹೆರಿಗೆಗಾಗಿ ಮಹಿಳೆಯನ್ನು ದೋಣಿ ಮೂಲಕ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸುತ್ತಿರುವಾಗಲೇ ಆಕೆಗೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಬೇರೆ ದಾರಿ ತೋಚದೇ, ನದಿ ದಂಡೆಯಲ್ಲೇ ಹೆರಿಗೆ ಮಾಡಿಸಲಾಗಿದೆ. ಗೃಹ ರಕ್ಷಕ ಸಿಬಂದಿ ಎಲ್ಲ ಅಗತ್ಯ ವ್ಯವಸ್ಥೆ ಕಲ್ಪಿಸಿ ಹೆರಿಗೆಗೆ ನೆರವಾಗಿದ್ದಾರೆ.