ದೇಶದಲ್ಲಿ 50 ಸ್ಮಾರಕಗಳು ಕಣ್ಮರೆ! ; ಸಂಸ್ಕೃತಿ ಸಚಿವಾಲಯದ ವರದಿ
Team Udayavani, Jan 2, 2023, 7:34 AM IST
ನವದೆಹಲಿ: ದೇಶದಲ್ಲಿ ಭಾರತೀಯ ಪುರಾತತ್ವ ಇಲಾಖೆ ವತಿಯಿಂದ ಸಂರಕ್ಷಿತ 3,693 ಸ್ಮಾರಕಗಳ ಪೈಕಿ, ಅತಿಯಾದ ನಗರೀಕರಣದ ಪರಿಣಾಮ ಸುಮಾರು 50 ಸ್ಮಾರಕಗಳು ಕಣ್ಮರೆಯಾಗಿವೆ ಎಂದು ಸಂಸತ್ಗೆ ಕೇಂದ್ರ ಸಂಸ್ಕೃತಿ ಸಚಿವಾಲಯ ಸಲ್ಲಿಸಿರುವ ವರದಿಯಲ್ಲಿ ತಿಳಿಸಲಾಗಿದೆ.
“ಭಾರತೀಯ ಪುರಾತತ್ವ ಇಲಾಖೆಯ ರಕ್ಷಣೆಯಲ್ಲಿರುವ ರಾಷ್ಟ್ರೀಯ ಪ್ರಾಮುಖ್ಯತೆಯ ಸುಮಾರು 50 ಸ್ಮಾರಕಗಳನ್ನು ಕ್ಷಿಪ್ರ ನಗರೀಕರಣ, ಅಣೆಕಟ್ಟುಗಳಿಂದ ಮುಳುಗಡೆ ಸೇರಿದಂತೆ ಅನೇಕ ಸಮಸ್ಯೆಗಳಿಂದ ಕಳೆದ ಕೆಲವು ವರ್ಷಗಳಲ್ಲಿ ಪತ್ತೆಹಚ್ಚಲಾಗುತ್ತಿಲ್ಲ ಎಂಬುದು ತೀವ್ರ ಕಳವಳಕಾರಿ ವಿಷಯ,’ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಈ ಪೈಕಿ ಉತ್ತರ ಪ್ರದೇಶದಲ್ಲಿ 11 ಸ್ಮಾರಕಗಳು, ದೆಹಲಿ ಮತ್ತು ಹರ್ಯಾಣದಲ್ಲಿ ತಲಾ ಎರಡು ಸ್ಮಾರಕಗಳು ಕಣ್ಮರೆಯಾಗಿವೆ. ಅದೇ ರೀತಿ ಅಸ್ಸಾಂ, ಪಶ್ಚಿಮ ಬಂಗಾಳ, ಅರುಣಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಸ್ಮಾರಕಗಳು ಕಣ್ಮರೆಯಾಗಿವೆ. ಕ್ಷಿಪ್ರ ನಗರೀಕರಣದಿಂದ 14, ಅಣೆಕಟ್ಟು ನೀರಿನಲ್ಲಿ ಮುಳುಗಿ 12 ಹಾಗೂ ಇತರೆ 12 ಸ್ಮಾರಕಗಳ ಸ್ಥಳಗಳು ಪತ್ತೆಯಾಗುತ್ತಿಲ್ಲ.