ವಿದ್ಯುತ್ ಕಾಯಿದೆ ತಿದ್ದುಪಡಿ: ಮೋದಿ ನಿಕಟವರ್ತಿಗಳಿಗೆ ಲಾಭ: ಕೇಜ್ರಿ
Team Udayavani, Sep 29, 2018, 4:03 PM IST
ಹೊಸದಿಲ್ಲಿ : ಬಿಜೆಪಿ ನೇತೃತ್ವದ ಕೇಂದ್ರ ಸರಕಾರ 2003ರ ವಿದ್ಯುತ್ ಶಕ್ತಿ ಕಾಯಿದೆಗೆ ತರಲು ಉದ್ದೇಶಿಸಿರುವ ತಿದ್ದುಪಡಿಯು ಜನಸಾಮಾನ್ಯರಿಗೆ ಅತ್ಯಂತ ಮಾರಕಪ್ರಾಯವಾಗಲಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಎಚ್ಚರಿಸಿದ್ದಾರೆ.
ಕೇಂದ್ರ ಸರಕಾರದ ಪ್ರಸ್ತಾವಿತ ತಿದ್ದುಪಡಿಯಿಂದ ಕೆಲವೇ ಕೆಲವು ವಿದ್ಯುತ್ ಕಂಪೆನಿಗಳು ಭಾರೀ ಲಾಭ ವಾಗಲಿದ್ದು ಇದರಿಂದ ಜನಸಾಮಾನ್ಯರು ಮತ್ತು ರೈತರ ಮೇಲೆ ತೀವ್ರವಾದ ಆರ್ಥಿಕ ಹೊರೆ ಬೀಳಲಿದೆ ಎಂದು ಕೇಜ್ರಿವಾಲ್ ಟೀಕಿಸಿದ್ದಾರೆ.
ಕೇಂದ್ರ ಸರಕಾರದ ಪ್ರಸ್ತಾವಿತ ತಿದ್ದುಪಡಿಯಿಂದಾಗಿ ಕ್ರಾಸ್ ಸಬ್ಸಿಡಿ ಕೊನೆಗೊಳ್ಳಲಿದೆ; ಪರಿಣಾಮವಾಗಿ ವಿದ್ಯುತ್ ಯೂನಿಟ್ ಬೆಲೆ ಎರಡರಿಂದ ಐದು ಪಟ್ಟು ಏರಲಿದೆ; ಬಡವರು, ರೈತರ ಮಾತು ಹಾಗಿರಲಿ, ಮಧ್ಯಮ ವರ್ಗದ ಜನರ ಮೇಲೆ ಕೂಡ ಇದು ಭಾರೀ ದೊಡ್ಡ ಪ್ರಹಾರವಾಗಿ ಪರಿಣಮಿಸಲಿದೆ ಎಂದು ಕೇಜ್ರಿವಾಲ್ ತಮ್ಮ ನಿವಾಸದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.
ಈ ಬಗ್ಗೆ ನಾನು ಬಿಜೆಪಿಯೇತರ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಅವರನ್ನು ಖುದ್ದು ಭೇಟಿಯಾಗುತ್ತೇನೆ; ಇದೊಂದು ಅತ್ಯಂತ ಕರಾಳ ತಿದ್ದುಪಡಿ ಎಂದು ಅವರಿಗೆ ಮನವರಿಕೆ ಮಾಡುತ್ತೇನೆ. ಪ್ರಧಾನಿ ಮೋದಿ ಅವರಿಗೆ ನಿಕಟವಿರುವ ಕೆಲವೇ ಕೆಲವು ದೊಡ್ಡ ವಿದ್ಯುತ್ ಕಂಪೆನಿಗಳಿಗೆ ಮಾತ್ರವೇ ಲಾಭ ಮಾಡಿಕೊಡುವ ಉದ್ದೇಶ ಈ ತಿದ್ದುಪಡಿಯದ್ದಾಗಿದೆ ಎಂದು ತಿಳಿಸುತ್ತೇನೆ, ಅಂತೆಯೇ ಜನಜಾಗೃತಿ ಮಾಡುತ್ತೇನೆ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಕೇಜ್ರಿವಾಲ್ ಗುಡುಗಿದರು.