ಮಕ್ಕಳ ಮರಣ ಮೃದಂಗ: 113ಕ್ಕೇರಿಕೆ
ಮುಂದುವರಿದ ಮಿದುಳು ಜ್ವರದ ಸಾವಿನ ಪ್ರಕರಣ
Team Udayavani, Jun 20, 2019, 5:00 AM IST
ಮುಜಫ್ಫರಪುರ: ಬಿಹಾರದ ಮುಜಫ್ಫರಪುರದಲ್ಲಿ ಮಿದುಳು ಜ್ವರದಿಂದ ಅಸುನೀಗುತ್ತಿರುವ ಮಕ್ಕಳ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಬುಧವಾರ ಈ ಸಂಖ್ಯೆ 113ಕ್ಕೇರಿದೆ. ಮಂಗಳವಾರ ರಾತ್ರಿ ಮತ್ತೆ 22ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜೂ.1ರಿಂದ ಒಟ್ಟು 518 ಮಕ್ಕಳು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದೇ ವೇಳೆ, ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲೂ ಒಂದು ಮಗು ಸಾವನ್ನಪ್ಪಿದೆ.
ಸಿಎಂ-ಡಿಸಿಎಂ ವಿರುದ್ಧ ದೂರು: ಇದೇ ವೇಳೆ, ಮಕ್ಕಳ ಸಾವಿನಿಂದ ಕಂಗೆಟ್ಟಿರುವ ಸ್ಥಳೀಯರೊಬ್ಬರು ಮುಖ್ಯಮಂತ್ರಿ ನಿತೀಶ್ ಕುಮಾರ್, ಡಿಸಿಎಂ ಸುಶೀಲ್ ಮೋದಿ, ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ಸಹಾಯಕ ಸಚಿವ ಅಶ್ವಿನಿ ಚೌಬೆ, ರಾಜ್ಯ ಆರೋಗ್ಯ ಸಚಿವ ಮಂಗಲ್ ಪಾಂಡೆ ವಿರುದ್ಧ ಸ್ಥಳೀಯ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಇವರೆಲ್ಲರ ನಿರ್ಲಕ್ಷ್ಯದಿಂದಾಗಿಯೇ ಇಷ್ಟೊಂದು ಮಕ್ಕಳು ಪ್ರಾಣ ಕಳೆದುಕೊಳ್ಳಬೇಕಾಯಿತು ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಆಫ್ರಿಕಾದ ರಾಷ್ಟ್ರಗಳನ್ನೂ ಹಿಂದಿಕ್ಕಿದ ಮುಜಫ್ಪರಪುರ
ಆಫ್ರಿಕಾದಲ್ಲಿನ ಕಡು ಬಡ ರಾಷ್ಟ್ರಗಳಲ್ಲಿ ಹುಟ್ಟಿದ ಮಕ್ಕಳಿಗೆ ಅವರು ಹುಟ್ಟಿದ ಪ್ರದೇಶವೇ ನರಕವಿದ್ದಂತೆ ಎಂದು ನೀವು ಭಾವಿಸಬಹುದು. ಆದರೆ, ಬಿಹಾರದ ಮುಜಫ್ಫರಪುರಕ್ಕೆ ಹೋಲಿಸಿದರೆ ಆಫ್ರಿಕಾದ ರಾಷ್ಟ್ರಗಳೇ ಎಷ್ಟೋ ಮೇಲು ಎನ್ನುತ್ತದೆ ಹೊಸ ದತ್ತಾಂಶಗಳು. ಈ ಜಿಲ್ಲೆಯಲ್ಲಿ ಮಕ್ಕಳ ಪೌಷ್ಟಿಕಾಂಶ ಮತ್ತು ಆರೋಗ್ಯ ಸೇವೆಯ ಬಗ್ಗೆ ಸರ್ಕಾರಗಳು ತಲೆಕೆಡಿಸಿಕೊಂಡೇ ಇಲ್ಲ. 2016ರಿಂದ 2018ರ ಅವಧಿಯಲ್ಲೂ ಬಿಹಾರವೊಂದರಲ್ಲೇ 228 ಮಿದುಳು ಜ್ವರ ಪ್ರಕರಣ ಪತ್ತೆಯಾಗಿದ್ದು, 46 ಮಕ್ಕಳನ್ನು ಬಲಿಪಡೆದಿತ್ತು. ಮಕ್ಕಳ ಪೌಷ್ಟಿಕಾಂಶ, ಸ್ತನ್ಯಪಾನ, ಅನೀಮಿಯಾ ಸೇರಿದಂತೆ ವಿವಿಧ ಅಂಶಗಳ ಆಧಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆ, ವಿಶ್ವಬ್ಯಾಂಕ್, ಯುನಿಸೆಫ್ ಜಂಟಿಯಾಗಿ ನಡೆಸಿರುವ ಅಧ್ಯಯನ ವರದಿಯಲ್ಲಿ ಮುಜಫ್ಫರಪುರ ಮತ್ತು ಆಫ್ರಿಕಾದ ರಾಷ್ಟ್ರಗಳಲ್ಲಿನ ಸ್ಥಿತಿಗಳನ್ನು ತುಲನೆ ಮಾಡಲಾಗಿದ್ದು, ಮುಜಫ್ಫರಪುರದ ಸ್ಥಿತಿಯೇ ಹೀನಾಯವಾದದ್ದು ಎಂಬುದು ತಿಳಿದುಬಂದಿದೆ.