ಅಸ್ಸಾಂ ಪ್ರವಾಹ: ಮೂವರ ಸಾವು, 25,000ಕ್ಕೂ ಹೆಚ್ಚು ಜನರು ಸಂತ್ರಸ್ತ
ಮೇಘಾಲಯ, ಅರುಣಾಚಲ ಪ್ರದೇಶದಲ್ಲಿ ನಿರಂತರ ಮಳೆ
Team Udayavani, May 15, 2022, 1:43 PM IST
ನವದೆಹಲಿ: ಈ ವರ್ಷ ಮುಂಗಾರು ಆರಂಭಕ್ಕೂ ಮುನ್ನ ಸಂಭವಿಸಿದ ಮೊದಲ ಪ್ರವಾಹದಲ್ಲಿ ಅಸ್ಸಾಂನ ಆರು ಜಿಲ್ಲೆಗಳಲ್ಲಿ ಸುಮಾರು 25,000 ಜನರು ಸಂತ್ರಸ್ತರಾಗಿದ್ದಾರೆ. ದಿಮಾ ಹಸಾವೊ ಜಿಲ್ಲೆಯ ಹಫ್ಲಾಂಗ್ ಪ್ರದೇಶದಲ್ಲಿ ಶನಿವಾರ ಸಂಭವಿಸಿದ ಭೂಕುಸಿತ ಘಟನೆಗಳಲ್ಲಿ ಮಹಿಳೆ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ.
ಅಸ್ಸಾಂ ಮತ್ತು ನೆರೆಯ ರಾಜ್ಯಗಳಾದ ಮೇಘಾಲಯ ಮತ್ತು ಅರುಣಾಚಲ ಪ್ರದೇಶದಲ್ಲಿ ಕಳೆದೆರಡು ದಿನಗಳಿಂದ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ನದಿಗಳ ನೀರಿನ ಮಟ್ಟ ಕ್ರಮೇಣ ಹೆಚ್ಚುತ್ತಿದ್ದು, ಕೊಪಿಲಿ ನದಿಯಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರವಾಹ ವರದಿಗಳ ಪ್ರಕಾರ, ಮೇ 14 ರವರೆಗೆ, ಆರು ಜಿಲ್ಲೆಗಳ 94 ಹಳ್ಳಿಗಳಲ್ಲಿ ಒಟ್ಟು 24,681 ಜನರು ಹಾನಿಗೊಳಗಾಗಿದ್ದಾರೆ.
ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ 1732.72 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಮುಳುಗಡೆಯಾಗಿದೆ. ಕ್ಯಾಚಾರ್ ಜಿಲ್ಲೆಯಲ್ಲಿಯೇ 21,000 ಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ. ಸೇನೆ, ಅರೆ ಮಿಲಿಟರಿ ಪಡೆಗಳು, ಎಸ್ಡಿಆರ್ಎಫ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಶನಿವಾರ ಕ್ಯಾಚಾರ್ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಂದ 2,150 ಜನರನ್ನು ರಕ್ಷಿಸಿವೆ. ಹೋಜೈ, ಲಖಿಂಪುರ, ನಾಗಾಂವ್ ಜಿಲ್ಲೆಗಳಲ್ಲಿ ಹಲವಾರು ರಸ್ತೆಗಳು, ಸೇತುವೆಗಳು ಮತ್ತು ನೀರಾವರಿ ಕಾಲುವೆಗಳು ಹಾನಿಗೊಳಗಾಗಿವೆ.