ಶಿವಸೇನೆ ಕಾರ್ಯಕರ್ತರು ನನ್ನ ಹತ್ಯೆಗೆ ಯತ್ನಿಸಿದ್ದರು: ಕಿರಿಟ್ ಸೋಮಯ್ಯ
ಕಾರಿಗೆ ಕಲ್ಲು ತೂರಾಟ : ಪ್ರಕರಣ ದಾಖಲು
Team Udayavani, Apr 24, 2022, 1:29 PM IST
ಮುಂಬಯಿ : ಮಹಾರಾಷ್ಟ್ರ ರಾಜಕಾರಣದಲ್ಲಿ ತೀವ್ರ ಸಂಘರ್ಷಮಯ ವಾತಾವರಣ ನಿರ್ಮಾಣವಾಗಿದ್ದು, ಹನುಮಾನ್ ಚಾಲೀಸಾ ವಿಚಾರದಲ್ಲಿ ಆರೋಪ ಪ್ರತ್ಯಾರೋಪಗಳು ತೀವ್ರವಾಗಿದ್ದು, ಬಿಜೆಪಿ ನಾಯಕ ಕಿರಿಟ್ ಸೋಮಯ್ಯ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆದಿದ್ದು, ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಖಾರ್ ಪೊಲೀಸ್ ಠಾಣೆ ಬಳಿ ಬಿಜೆಪಿ ಮಾಜಿ ಸಂಸದ ಕಿರಿಟ್ ಸೋಮಯ್ಯ ಅವರ ಕಾರಿಗೆ ಕಲ್ಲು ತೂರಾಟ ನಡೆಸಿದ ಆರೋಪದ ಮೇಲೆ ಮುಂಬೈ ಪೊಲೀಸರು ಭಾನುವಾರ ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ, ಪೊಲೀಸರು ಪ್ರಕರಣ ದಾಖಲಿಸಿರುವ ಸೆಕ್ಷನ್ಗಳ ಬಗ್ಗೆ ತೃಪ್ತರಾಗದ ಕಾರಣ ಸೋಮಯ್ಯ ಎಫ್ಐಆರ್ ಪ್ರತಿಯನ್ನು ತೆಗೆದುಕೊಳ್ಳಲು ನಿರಾಕರಿಸಿದರು ಎಂದು ಅವರು ಹೇಳಿದರು.
ಬಂಧಿತ ಸ್ವತಂತ್ರ ಸಂಸದೆ ನವನೀತ್ ರಾಣಾ ಮತ್ತು ಅವರ ಪತಿ ಶಾಸಕ ರವಿ ರಾಣಾ ಅವರನ್ನು ಭೇಟಿ ಮಾಡಲು ಸೋಮಯ್ಯ ಅವರು ಶನಿವಾರ ಖಾರ್ ಪೊಲೀಸ್ ಠಾಣೆಗೆ ತೆರಳಿದ್ದರು, ಈ ಹಿಂದೆ ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಅವರ ನಿವಾಸ ‘ಮಾತೋಶ್ರೀ’ ಹೊರಗೆ ಹನುಮಾನ್ ಚಾಲೀಸಾ ಪಠಣಕ್ಕೆ ಅವರು ಕರೆ ನೀಡಿದ್ದರು, ಇದು ಶಿವಸೇನೆ ಕಾರ್ಯಕರ್ತರನ್ನು ಕೆರಳಿಸಿದೆ.
ಪೊಲೀಸ್ ಠಾಣೆಯ ಹೊರಗೆ ಜಮಾಯಿಸಿದ ಶಿವಸೇನೆ ಬೆಂಬಲಿಗರು ಸೋಮಯ್ಯ ಭೇಟಿಯನ್ನು ವಿರೋಧಿಸಿ ಘೋಷಣೆಗಳನ್ನು ಕೂಗಿ, ಎಸ್ಯುವಿಯಲ್ಲಿ ಪೊಲೀಸ್ ಠಾಣೆಯಿಂದ ಹೊರಡುತ್ತಿದ್ದಾಗ, ಕೆಲವು ಪ್ರತಿಭಟನಾಕಾರರು ಅವರ ವಾಹನಕ್ಕೆ ಪಾದರಕ್ಷೆಗಳು ಮತ್ತು ನೀರಿನ ಬಾಟಲಿಗಳನ್ನೂ ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ.