ಅಯೋಧ್ಯೆ ಪ್ರಕರಣ;40 ದಿನಗಳ ವಿಚಾರಣೆ ಅಂತ್ಯ, ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್
Team Udayavani, Oct 16, 2019, 4:41 PM IST
ನವದೆಹಲಿ: ರಾಜಕೀಯವಾಗಿ ಹಾಗೂ ಧಾರ್ಮಿಕವಾಗಿ ಅತೀ ಸೂಕ್ಷ್ಮ ಪ್ರಕರಣವಾಗಿರುವ ರಾಮ ಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ಭೂ ವಿವಾದದ ವಿಚಾರಣೆ ನಿರೀಕ್ಷೆಯಂತೆ ಸುಪ್ರೀಂಕೋರ್ಟ್ ಸಿಜೆಐ ಗೋಗೊಯಿ ನೇತೃತ್ವದ ಪಂಚಸದಸ್ಯ ಸಾಂವಿಧಾನಿಕ ಪೀಠದಲ್ಲಿ ಮುಕ್ತಾಯಗೊಂಡಿದ್ದು, ಅಂತಿಮ ತೀರ್ಪನ್ನು ಕಾಯ್ದಿರಿಸಿದೆ.
ಅಯೋಧ್ಯೆ ಜಾಗದ ವಿವಾದ ಕುರಿತು 40 ದಿನಗಳ ಕಾಲ ನಡೆಸಿದ ವಿಚಾರಣೆ ನಿಗದಿತ ದಿನಾಂಕಕ್ಕಿಂತ ಮೊದಲೇ ಮುಕ್ತಾಯಗೊಂಡಂತಾಗಿದೆ. ಈ ಮೊದಲು ಸಿಜೆಐ ಗೋಗೊಯಿ ಅವರು ಅಕ್ಟೋಬರ್ 17ರೊಳಗೆ ವಾದ ಮುಕ್ತಾಯಗೊಳಿಸುವಂತೆ ಸೂಚಿಸಿದ್ದರು.
ಇಂದು ವಾದ, ಪ್ರತಿವಾದಕ್ಕೆ ಉಭಯ ಪಕ್ಷಗಳ ವಕೀಲರಿಗೂ ಸಂಜೆ 5ಗಂಟೆಯವರೆಗೆ ಸಿಜೆಐ ಗಡುವು ನೀಡಿದ್ದರು. ಆ ನಿಟ್ಟಿನಲ್ಲಿ ಬುಧವಾರವೇ ಅಯೋಧ್ಯೆ-ಬಾಬ್ರಿ ಮಸೀದಿ ಭೂ ವಿವಾದದ ವಿಚಾರಣೆ ಅಂತ್ಯಗೊಂಡಿದ್ದು, 134 ವರ್ಷಗಳಷ್ಟು ಹಳೆಯ ವಿವಾದದ ಅಂತಿಮ ತೀರ್ಪನ್ನು ಸಿಜೆಐ ಗೋಗೊಯಿ ನಿವೃತ್ತಿಗೂ ಮುನ್ನ ಘೋಷಿಸುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.