PM ಮೋದಿ ಪ್ರಚಾರಕ್ಕೆ ಬರುವ ಮುನ್ನ ಇಡಿ, ಐಟಿ, ಸಿಬಿಐ ಬರುತ್ತದೆ: ಖರ್ಗೆ
ಎಲ್ಲರೂ ಜವಾನರಾಗಿ ಕೆಲಸಮಾಡುತ್ತಿದ್ದಾರೆ ಎಂದು ಕಿಡಿ
Team Udayavani, Nov 6, 2023, 7:15 PM IST
ಜೋಧ್ ಪುರ (ರಾಜಸ್ಥಾನ): ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣ ಪ್ರಚಾರದ ಹಾದಿಯನ್ನು ಹಿಡಿಯುವ ಮೊದಲು ಪ್ರತಿಪಕ್ಷಗಳನ್ನು ಗುರಿಯಾಗಿಸಲು ಕೇಂದ್ರ ಏಜೆನ್ಸಿಗಳನ್ನು ಕಳುಹಿಸುತ್ತಾರೆ, ಇಡಿ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆ ಅವರ ಜವಾನರ ರೀತಿ ಕೆಲಸ ಮಾಡುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಲೇವಡಿ ಮಾಡಿದ್ದಾರೆ.
ರಾಜಸ್ಥಾನದಲ್ಲಿ ನವೆಂಬರ್ 25 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಜೋಧ್ಪುರದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಇದು ಚುನಾವಣಾ ಸಮಯವಾದ್ದರಿಂದ ಪ್ರಧಾನಿ ಈಗ ಬಡವರ ಬಗ್ಗೆ ಯೋಚಿಸುತ್ತಿದ್ದಾರೆ.ಬಡವರಿಗೆ ತೊಂದರೆ ಕೊಡುವ ಅವರು ಅದಾನಿ ಅವರಂತಹ ಕೈಗಾರಿಕೋದ್ಯಮಿ ಸ್ನೇಹಿತರನ್ನು ಬೆಂಬಲಿಸುತ್ತಾರೆ. ಬಡವರ ಮತಗಳನ್ನು ಪಡೆದು ನಂತರ ಶ್ರೀಮಂತರಿಗೆ ಸಹಾಯ ಮಾಡುತ್ತಾರೆ. ಮೋದಿ ಯುಗದಲ್ಲಿ, ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ ಮತ್ತು ಬಡವರು ಬಡವರಾಗುತ್ತಿದ್ದಾರೆ”ಎಂದರು.
ತನಿಖಾ ಏಜೆನ್ಸಿಗಳ ಜನರು ನಮ್ಮ ಹಿಂದೆ ಇದ್ದಾರೆ, ಅವರು ಇರಲಿ. ಅವರು ಹಿಂದೆ ಉಳಿಯುತ್ತಾರೆ ಮತ್ತು ನಾವು ಮುಂದುವರಿಯುತ್ತೇವೆ ಎಂದು ಖರ್ಗೆ ಆಕ್ರೋಶ ಹೊರ ಹಾಕಿದರು.