ಸಾರ್ವಜನಿಕರೆದುರೇ ಗುಂಡಿಕ್ಕಿ ಬಿಜೆಪಿ ಮುಖಂಡನ ಬರ್ಬರ ಹತ್ಯೆ
Team Udayavani, Sep 1, 2022, 9:01 PM IST
ಗುರುಗ್ರಾಮ: ಸದರ್ ಬಜಾರ್ ಪ್ರದೇಶದ ಬಟ್ಟೆ ಮಳಿಗೆಯಲ್ಲಿ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಗುರುವಾರ ಸಾರ್ವಜನಿಕರು ನೋಡುತ್ತಿದ್ದಂತೆ ಸ್ಥಳೀಯ ಬಿಜೆಪಿ ಮುಖಂಡನನ್ನು ಗುಂಡಿಕ್ಕಿ ಕೊಂದಿದ್ದಾರೆ.
ಮೃತರನ್ನು ರಿಥೋಜ್ ಗ್ರಾಮದ ನಿವಾಸಿ ಸುಖಬೀರ್ ಖತಾನಾ ಅಲಿಯಾಸ್ ಸುಖಿ ಎಂದು ಗುರುತಿಸಲಾಗಿದೆ. ಅವರು ಮಾರುತಿ ಕುಂಜ್, ಭೋಂಡ್ಸಿಯಲ್ಲಿ ವಾಸಿಸುತ್ತಿದ್ದರು.
ಸೋಹ್ನಾ ಮಾರುಕಟ್ಟೆ ಸಮಿತಿಯ ಉಪಾಧ್ಯಕ್ಷ ಆಗಿರುವ ಮೃತರ ಮಗ, ತನ್ನ ಸಂಬಂಧಿಕರೊಬ್ಬರು ಮತ್ತು ಅವರ ಸಹಚರರೇ ಕೊಲೆಯ ಮಾಡಿದ್ದಾರೆ ಎಂದು ಆರೋಪ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಹತ್ಯೆ ನಡೆದ ಶೋರೂಂನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಐವರು ದಾಳಿಕೋರರು, ಅವರಲ್ಲಿ ಇಬ್ಬರು ಕಪ್ಪು ಟೀ ಶರ್ಟ್, ಒಂದು ಬಿಳಿ ಚೆಕ್ ಶರ್ಟ್, ಮತ್ತೊಂದು ಕ್ಯಾಪ್ ಮತ್ತು ಒಂದು ಕೆಂಪು ಶರ್ಟ್ ಧರಿಸಿ, ಗುಂಡಿಕ್ಕಿ ಹತ್ಯೆಗೈದ ನಂತರ ಶೋರೂಂನಿಂದ ಹೊರಟು ಹೋಗುವುದನ್ನು ದೃಶ್ಯಾವಳಿಗಳು ತೋರಿಸಿವೆ.
ಅವರಲ್ಲಿ ನಾಲ್ವರು ಮುಖಗವಸುಗಳನ್ನು ಧರಿಸಿದ್ದರು, ಐದನೆಯವ ಬಿಳಿ ಟವೆಲ್ ಹಿಂದೆ ಮುಖವನ್ನು ಮರೆಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಖತಾನಾ ಅವರು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ನಿಕಟವರ್ತಿಯಾಗಿದ್ದು, ಸೊಹ್ನಾದಿಂದ ಜಿಲ್ಲಾ ಪರಿಷತ್ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ.