ಮಕ್ಕಳ ಜೀವ ಉಳಿಸಲು ಬೂಟ್ ಪಾಲಿಶ್!
Team Udayavani, Jun 23, 2019, 5:00 AM IST
ಪಟನಾ: ಬಿಹಾರದ ಮುಜಫ್ಫರ್ಪುರದ ಆಸ್ಪತ್ರೆಯಲ್ಲಿ ಮೆದುಳು ಜ್ವರಕ್ಕೆ ತುತ್ತಾಗಿ ದಾಖಲಾಗುತ್ತಿರುವ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ಹಣ ಸಂಗ್ರಹಿಸುವ ಉದ್ದೇಶದಿಂದ ಪಟನಾದ ಜನ್ ಅಧಿಕಾರ್ ಛಾತ್ರ ಪರಿಷತ್ಸದಸ್ಯರು ನಗರದಲ್ಲಿ ಬೂಟ್ ಪಾಲಿಶ್ ಅಭಿಯಾನ ಆರಂಭಿಸಿದ್ದಾರೆ.
ಆಸ್ಪತ್ರೆಯಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯಗಳಿಲ್ಲದೆ ಕೆಲವು ದಿನಗಳಲ್ಲೇ 100ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ದಾರೆ. ಇಷ್ಟಾದರೂ, ಆಸ್ಪತ್ರೆಗೆ ಮೂಲ ಸೌಕರ್ಯಗಳು ಪೂರೈಕೆಯಾಗದ್ದಕ್ಕೆ ಅಸಮಾಧಾನಗೊಂಡಿರುವ ಪರಿಷತ್ನ ಯುವಕರು ಈ ಅಭಿಯಾನ ಆರಂಭಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಪರಿಷತ್ನ ಉಪಾಧ್ಯಕ್ಷ ಮನೀಶ್ ಯಾದವ್, ‘ಯೋಗ ದಿನಾಚರಣೆಯ ಹೆಸರಲ್ಲಿ ದೇಶಾದ್ಯಂತ ಕೋಟ್ಯಂತರ ರೂ.ಗಳನ್ನು ವ್ಯಯ ಮಾಡಲಾಗಿದೆ. ಆದರೆ, ಮುಜಪ್ಫರ್ಪುರ ಆಸ್ಪತ್ರೆಯಲ್ಲಿ ಮೂಲಸೌಕರ್ಯಗಳಿಲ್ಲದೆ ಮಕ್ಕಳು ಸಾಯುತ್ತಿದ್ದರೂ ಆ ಬಗ್ಗೆ ಯಾವ ಸರಕಾರವೂ ತಲೆಕೆಡಿಸಿಕೊಳ್ಳುತ್ತಿಲ್ಲ. ಆಸ್ಪತ್ರೆಗೆ ಸೌಕರ್ಯ ಕಲ್ಪಿಸಲು ಮುಂದಾಗುತ್ತಿಲ್ಲ. ಎಲ್ಲ ರಾಜಕಾರಣಿಗಳು ತಮ್ಮ ವೈಯಕ್ತಿಕ ಪ್ರತಿಷ್ಠೆಯನ್ನು ಬಿಂಬಿಸುವ ಪ್ರಯತ್ನದಲ್ಲೇ ಮುಳುಗಿಹೋಗಿದ್ದಾರೆ’ ಎಂದು ಬೇಸರಿಸಿದ್ದಾರೆ.