ಜಾನ್ಸ್ ಕರ್ ನದಿ ಭಾಗಗಳಲ್ಲಿ ಪ್ರವಾಹ : ಅಪಾರ ಬೆಳೆ ನಾಶ
Team Udayavani, Aug 22, 2021, 3:12 PM IST
ಪ್ರಾತಿನಿಧಿಕ ಚಿತ್ರ
ಲೇಹ್ (ಲಡಾಖ್ ) : ಲಡಾಖ್ ನ ಕೆಲವು ಭಾಗಗಳಲ್ಲಿ ಪ್ರವಾಹ ಸೃಷ್ಟಿಯಾಗಿದ್ದು, ಭಾರಿ ನಷ್ಟ ಸಂಭವಿಸಿದೆ ಎಂದು ವರದಿಯಾಗಿದೆ.
ಇಂದು (ಭಾನುವಾರ, ಆಗಸ್ಟ್ 22) ಲಡಾಖ್ ನ ಹಲವು ಗ್ರಾಮಗಳಲ್ಲಿ ಸೃಷ್ಟಿಯಾದ ಪ್ರವಾಹದಿಂದಾಗಿ ಒಂದು ಸೇತುವೆ ಮತ್ತು ಬೆಳೆಗಳಿಗೆ ಹಾನಿಯಾಗಿವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಆಫ್ಘಾನ್ ಅರಾಜಕತೆಯಿಂದ ಗಗನಕ್ಕೇರಿದ ಡ್ರೈ ಫ್ರೂಟ್ಸ್ ಬೆಲೆ
ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಡಿಡಿಎಂಎ) ಸಿಇಒ ಸೋನಂ ಚೋಸ್ಜೊರ್, ರುಂಬಕ್ ಗ್ರಾಮದ ಜಾನ್ಸ್ ಕರ್ ನದಿಯ ತಡೆಯಿಂದಾಗಿ ಕೃತಕ ಸರೋವರ ನಿರ್ಮಾಣವಾಗಿದೆ. ಇದು ಇಂದು(ಭಾನುವಾರ) ಬೆಳಗ್ಗೆ ಏಕಾಏಕಿ ಪ್ರವಾಹನ್ನು ಸೃಷ್ಟಿಸಿ, ರುಂಬಕ್ ಸೇತುವೆ ಹಾಗೂ ಸಮೀಪದ ಗ್ರಾಮಗಳಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆಗಳು ಹಾನಿಗೊಳಗಾಗಿವೆ ಎಂದು ತಿಳಿಸಿದ್ದಾರೆ.
ಇನ್ನು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಇದುವರೆಗೆ ಯಾವುದೇ ಸಾವು, ನೋವು ಸಂಭವಿಸಿಲ್ಲ. ವಿಪತ್ತು ನಿರ್ವಹಣಾ ತಂಡ ಸ್ಥಳದಲ್ಲಿ ಕಾರ್ಚರಿಸುತ್ತಿದೆ. ಅಪಾಯದಂಚಿನಲ್ಲಿರುವ ಪ್ರದೇಶಗಳಲ್ಲಿನ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ರುಂಬಕ್, ಜಿಂಗ್ಚೆನ್, ಯುರುತ್ಸೆ ಮತ್ತು ರಮ್ ಚುಂಗ್ ಗೆ ಸಂರ್ಪಕಿಸುವ ಪ್ರಮುಖ ರಸ್ತೆಗಳಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದ್ದು, ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ಮೇಲೆ ಸಂಚಾರಕ್ಕೆ ಮುಕ್ತವಾಗಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪ್ರವಾಹ ಸೃಷ್ಟಿಯಾದ ಸ್ಥಳಗಳಲ್ಲಿ ಹಿರಿಯ ಅಧಿಕಾರಿಗಳು ಮೇಲ್ವಿಚಾರಣೆ ನಡೆಸುತ್ತಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಕೂಡ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಡಿಡಿಎಂಎ, ಸಿಂಧೂ ನದಿಯಲ್ಲೂ ಪ್ರವಾಹ ಸೃಷ್ಟಿಯಾಗುವ ಸಾಧ್ಯತೆ ಇದ್ದು, ಯಾವುದೇ ಪರಿಸ್ಥಿತಿ ಪ್ರವಾಹವನ್ನು ಎದುರಿಸಲು ಸಿದ್ಧರಾಗಿರುವಂತೆ ನಾಗರಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : ಪುರುಷರಿಗಿಂತ ನಾವೇನು ಕಮ್ಮಿ ಇಲ್ಲ ಎಂದು ಸಾಬೀತುಪಡಿಸಿದ ಗೋವಾ ನಗರಸೇವಕಿ ಅಶ್ವಿನಿ ಪಾಲಯೇಕರ್