ಸಿಎಎ ಕಾಯ್ದೆ ನಿಯಮ ಸಿದ್ಧತೆ ಹಂತದಲ್ಲಿದೆ, ಎನ್ ಆರ್ ಸಿ ಸದ್ಯಕ್ಕಿಲ್ಲ; ಕೇಂದ್ರ ಸರ್ಕಾರ
ಮದುವೆಯ ಬಳಿಕ ಬಲವಂತದ ಮತಾಂತರ ತಡೆಯಲು ದೇಶವ್ಯಾಪಿ ಕಾಯ್ದೆ ಇಲ್ಲ ಎಂದಿದ್ದಾರೆ.
Team Udayavani, Feb 3, 2021, 10:30 AM IST
ನವದೆಹಲಿ: ಸಂಸತ್ನ ಅನುಮೋದನೆ ಪಡೆದಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮ ಸಿದ್ಧತೆಯ ಹಂತದಲ್ಲಿದೆ. ಹೀಗಾಗಿ, ಅದನ್ನು ಜಾರಿ ಮಾಡಲು ಇನ್ನೂ ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಮಂಗಳವಾರ ತಿಳಿಸಿದೆ. ಈ ಬಗ್ಗೆ ಕೇಳಲಾಗಿರುವ ಲಿಖಿತ ಉತ್ತರ ನೀಡಿದ ಕೇಂದ್ರ ಗೃಹ ಖಾತೆ ಸಹಾ ಯಕ ಸಚಿವ ನಿತ್ಯಾನಂದ ರಾಯ್, “ಲೋಕಸಭೆ ಮತ್ತು ರಾಜ್ಯಸಭೆಗಾಗಿ ಇರುವ ಸಮಿತಿಗಳು ಈ ಅಂಶ ಪರಿಶೀಲನೆ ನಡೆಸುತ್ತಿವೆ.
ಇದನ್ನೂ ಓದಿ:ಸುಬ್ರಹ್ಮಣ್ಯ: ನಾಯಿಯನ್ನು ಓಡಿಸಿಕೊಂಡು ನಾಡಿಗೆ ಬಂದ ಚಿರತೆ ಶೌಚಾಲಯದಲ್ಲಿ ಬಂಧಿ!
ಅವುಗಳಿಗೆ ನೀಡಲಾಗಿರುವ ಅವಧಿಯನ್ನು ಕ್ರಮವಾಗಿ ಏ.9, ಜು.9ಕ್ಕೆ ವಿಸ್ತರಿಸಲಾಗಿದೆ. ಈಗಾಗಲೇ ಅನುಮೋದನೆ ಪಡೆದು ಕೊಂಡಿರುವ ಸಿಎಎ ನಿಯಮಗಳನ್ನು ಸಿದ್ಧಗೊಳಿಸಿ, ಜಾರಿ ಮಾಡಲು ಹೆಚ್ಚಿನ ಸಮಯ ಬೇಕಾಗಬಹುದು’ ಎಂದು ತಿಳಿಸಿದ್ದಾರೆ.
ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಲ್ಲಿ ಧಾರ್ಮಿಕವಾಗಿ ಅಲ್ಪ ಸಂಖ್ಯಾತರಾಗಿ, ದೌರ್ಜನ್ಯಕ್ಕೆ ಒಳಗಾಗಿರುವ ಹಿಂದೂ, ಸಿಖ್, ಜೈನ, ಬೌದ್ಧ, ಪಾರ್ಸಿ ಮತ್ತು ಕ್ರಿಶ್ಚಿಯನ್ ಸಮುದಾಯಗಳಿಗೆ ದೇಶದ ಪೌರತ್ವವನ್ನು ಈ ಕಾಯ್ದೆ ವ್ಯಾಪ್ತಿ ಯಲ್ಲಿ ನೀಡಲಾಗು ತ್ತದೆ. 2019 ಡಿ.12ರಂದು ರಾಷ್ಟ್ರಪತಿ ಕಾಯ್ದೆಗೆ ಅನು ಮೋದನೆ ನೀಡಿ ಸಹಿ ಹಾಕಿದ್ದರು. ಕಾಯ್ದೆಗೆ ಅನುಮೋದನೆ ಪಡೆದ ಬಳಿಕ ಭಾರೀ ಪ್ರಮಾಣ ದಲ್ಲಿ ಪ್ರತಿಭಟನೆ ನಡೆದಿತ್ತು. ವಿಶೇಷವಾಗಿ ಈಶಾನ್ಯ ದಿಲ್ಲಿಯಲ್ಲಿ ಅಹಿತಕರ ಘಟನೆಗಳು ನಡೆದು 53 ಮಂದಿ ಅಸುನೀಗಿದ್ದರು.
ಎನ್ಆರ್ಸಿ ಕೂಡ ವಿಳಂಬ: ಮತ್ತೂಂದೆಡೆ, ದೇಶ ದಲ್ಲೀಗ ಕೊರೊನಾ ಸೋಂಕಿನ ಅಬ್ಬರ ಕಡಿಮೆ ಯಾ ಗಿದ್ದರೂ, ಸದ್ಯಕ್ಕೆ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ ಆರ್ಸಿ) ಪ್ರಕ್ರಿಯೆ ಕೈಗೊಳ್ಳುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಮೂಲಕ ಜನಗಣತಿ ಹಾಗೂ ಎನ್ಆರ್ಸಿ ಕುರಿತು ದೇಶವಾಸಿಗಳಲ್ಲಿ ಮೂಡಿದ್ದ ಆತಂಕ ವನ್ನು ದೂರ ಮಾಡಲು ಸರ್ಕಾರ ಯತ್ನಿಸಿದೆ.
ಸಂಸದೀಯ ಸ್ಥಾಯಿ ಸಮಿತಿಯ ವರದಿಗೆ ಪ್ರತಿಕ್ರಿಯೆಯಾಗಿ ಕೇಂದ್ರ ಗೃಹ ಸಚಿವಾಲಯ ಈ ಸ್ಪಷ್ಟನೆ ನೀಡಿದ್ದು, “ಗಣತಿಯಲ್ಲಿ ಸಂಗ್ರಹಿಸಲಾಗುವ ಎಲ್ಲ ವೈಯಕ್ತಿಕ ಮಟ್ಟದ ಮಾಹಿತಿಯು ರಹಸ್ಯವಾಗಿರುತ್ತದೆ. ವಿವಿಧ ಆಡಳಿತಾತ್ಮಕ ಮಟ್ಟದಲ್ಲಿ ಕೇವಲ ಒಟ್ಟಾರೆ ದತ್ತಾಂಶವನ್ನು ಬಿಡುಗಡೆ ಮಾಡಲಾಗುತ್ತದೆ. ಈ ಹಿಂದಿನ ಗಣತಿಗಳಂತೆಯೇ, 2021ರ ಗಣತಿಯನ್ನು ಯಶಸ್ವಿಯಾಗಿ ಪೂರ್ಣ ಗೊಳಿಸುವ ನಿಟ್ಟಿನಲ್ಲಿ ಸೂಕ್ತ ಜನಜಾಗೃತಿ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗುವುದು. ಗಣತಿ ಹಾಗೂ ಎನ್ಪಿಆರ್ಗೆ ಸಂಬಂಧಿಸಿದ ಪ್ರಶ್ನಾವಳಿಗಳನ್ನೂ ಸಿದ್ಧ ಪಡಿಸಲಾದಿದೆ. ಆದರೆ, ಸದ್ಯದ ಮಟ್ಟಿಗಂತೂ ರಾಷ್ಟ್ರೀಯ ಮಟ್ಟದಲ್ಲಿ ಎನ್ಆರ್ಸಿ ಪ್ರಕ್ರಿಯೆ ಕೈಗೊಳ್ಳುವ ಬಗ್ಗೆ ನಿರ್ಧಾರ ಅಂತಿಮಗೊಂಡಿಲ್ಲ’ ಎಂದು ಹೇಳಿದೆ.
ಕಾಂಗ್ರೆಸ್ ಸಂಸದ ಆನಂದ್ ಶರ್ಮಾ ನೇತೃತ್ವದ ಸ್ಥಾಯಿ ಸಮಿತಿಯು ಕಳೆದ ವರ್ಷದ ಫೆಬ್ರವರಿಯಲ್ಲಿ ನೀಡಿದ ವರದಿಯಲ್ಲಿ, ಮುಂಬರುವ ಎನ್ಪಿಆರ್ ಮತ್ತು ಗಣತಿ ಕುರಿತು ಜನರಲ್ಲಿ ಆತಂಕ ಸೃಷ್ಟಿಯಾಗಿದೆ ಎಂದು ಉಲ್ಲೇಖಿಸಿತ್ತು.
ನಡೆಯದ ಕಲಾಪ: ರಾಜ್ಯಸಭೆ, ಲೋಕಸಭೆಯಲ್ಲಿ ಕಲಾಪ ನಡೆಸಲು ಸಾಧ್ಯವಾಗದೆ, ಬುಧವಾರಕ್ಕೆ ಮುಂದೂಡಿಕೆಯಾಗಿದೆ. ಎರಡೂ ಸದನಗಳಲ್ಲಿ ರೈತ
ಕಾಯ್ದೆಯ ಬಗ್ಗೆ ಚರ್ಚೆಯಾಗಬೇಕು ಎಂದು ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಸದಸ್ಯರು ಗದ್ದಲ ಎಬ್ಬಿಸಿದ್ದರಿಂದ ಕಲಾಪ ನಡೆಸಲು ಅಸಾಧ್ಯವಾಯಿತು. ಹೀಗಾಗಿ 2 ಸದನಗಳಲ್ಲಿ ಕಲಾಪ ಮುಂದೂಡಿಕೆ ಮಾಡಿದರೂ ಪರಿಸ್ಥಿತಿ ಸುಧಾರಣೆಯಾಗುವ ನಿರೀಕ್ಷೆ ವ್ಯರ್ಥವಾಯಿತು.
ದೇಶವ್ಯಾಪಿ ಕಾಯ್ದೆ ಇಲ್ಲ
ಮದುವೆಯ ಬಳಿಕ ಬಲ ವಂತವಾಗಿ ಮತಾಂತರ ತಡೆಗಟ್ಟಲು ದೇಶಕ್ಕೇ ಅನ್ವಯವಾಗುವ ಕಾಯ್ದೆ ಇಲ್ಲ. ಈ ಅಂಶಗಳೇನಿದ್ದರೂ ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಬರುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಜಿ.ಕಿಶನ್ ರೆಡ್ಡಿ ಲೋಕಸಭೆಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಮತಾಂತರ ವಿಚಾರ ತಡೆ ಯುವುದು, ನಿಯಂತ್ರಣ ಕ್ರಮಗಳು, ಕೇಸು ದಾಖಲು ಮಾಡುವುದು ಮತ್ತು ತನಿಖೆ ನಡೆಸುವುದು ರಾಜ್ಯ ಸರ್ಕಾರಗಳಿಗೆ ಸಂಬಂಧಿಸಿದ ವಿಚಾರವಾಗಿದೆ. ಹೀಗಾಗಿ, ಮದುವೆಯ ಬಳಿಕ ಬಲವಂತದ ಮತಾಂತರ ತಡೆಯಲು ದೇಶವ್ಯಾಪಿ ಕಾಯ್ದೆ ಇಲ್ಲ ಎಂದಿದ್ದಾರೆ.
ಮಧ್ಯಪ್ರದೇಶ, ಉತ್ತರ ಪ್ರದೇಶಗಳಲ್ಲಿ ಈ ಕಾಯ್ದೆ ಜಾರಿಯಲ್ಲಿದೆ. ಕರ್ನಾಟಕ ಸೇರಿದಂತೆ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಅದನ್ನು ಜಾರಿಗೆ ತರುವ ಬಗ್ಗೆ
ಚಿಂತನೆಗಳು ನಡೆದಿವೆ.
ಪರಿಷ್ಕಣೆಗೆ ಕ್ರಮ: ಇದೇ ವೇಳೆ ಇತರ ಹಿಂದುಳಿದ ವರ್ಗ (ಒಬಿಸಿ)ಗಳಿಗೆ ಇರುವ ಕೆನೆ ಪದರ ನಿರ್ಧರಿಸುವ ಇರುವ ಆದಾಯದ ಮಿತಿ ಬದಲು ಮಾಡುವ ನಿಟ್ಟಿನಲ್ಲಿನಲ್ಲಿ ಪರಿಶೀಲನೆ ನಡೆದಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.