CEO ಸುಚನಾ ಸೇಠ್ ತನಿಖೆಗೆ ಸಹಕರಿಸುತ್ತಿಲ್ಲ; ಪೊಲೀಸ್ ಕಸ್ಟಡಿ 5 ದಿನ ವಿಸ್ತರಣೆ
ಅಪರಾಧದ ಉದ್ದೇಶವನ್ನು ಕಂಡುಹಿಡಿಯಬೇಕಿದೆ...
Team Udayavani, Jan 15, 2024, 7:34 PM IST
ಪಣಜಿ: ತನ್ನ ನಾಲ್ಕು ವರ್ಷದ ಮಗನನ್ನು ಉಸಿರುಗಟ್ಟಿಸಿ ಹತ್ಯೆಗೈದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಎಐ ಸ್ಟಾರ್ಟ್ ಅಪ್ ಸಿಇಒ ಸುಚನಾ ಸೇಠ್ ಳ ಪೊಲೀಸ್ ಕಸ್ಟಡಿಯನ್ನು ಸೋಮವಾರ ಐದು ದಿನಗಳವರೆಗೆ ವಿಸ್ತರಿಸಲಾಗಿದೆ, ಅವರು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಗೋವಾ ನ್ಯಾಯಾಲಯ ತಿಳಿಸಿದೆ.
ಆರು ದಿನಗಳ ಆರಂಭಿಕ ಬಂಧನ ಅವಧಿ ಮುಗಿದ ನಂತರ ಸೇಠ್ ಳನ್ನು ಗೋವಾ ಮಕ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅಪರಾಧದ ಉದ್ದೇಶವನ್ನು ಕಂಡುಹಿಡಿಯಬೇಕಿದೆ ಮತ್ತು ಆಕೆಯ ಪರಿತ್ಯಕ್ತ ಪತಿ ವೆಂಕಟ್ ರಾಮನ್ ನೀಡಿದ ಹೇಳಿಕೆಯ ವಿವರಗಳೊಂದಿಗೆ ಅವಳ ತನಿಖೆ ನಡೆಸಬೇಕಾಗಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಜನವರಿ 8 ರಂದು ಕ್ಯಾಂಡೋಲಿಮ್ ಮೂಲದ ಸರ್ವಿಸ್ ಅಪಾರ್ಟ್ಮೆಂಟ್ನಲ್ಲಿ ಪುತ್ರನನ್ನು ಕೊಂದು ಬ್ಯಾಗ್ನಲ್ಲಿ ತುಂಬಿಕೊಂಡು ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದಾಗ ಚಿತ್ರದುರ್ಗದಲ್ಲಿ ಸೇಠ್ (39) ಳನ್ನು ಬಂಧಿಸಲಾಗಿತ್ತು. ಆಕೆಯನ್ನು ಮರಳಿ ಗೋವಾಕ್ಕೆ ಕರೆತರಲಾಗಿದ್ದು, ಮಾಪುಸಾ ಪಟ್ಟಣದ ನ್ಯಾಯಾಲಯ ಆಕೆಯನ್ನು ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.