ಛತ್ತೀಸಗಢ; ಹುಲಿ ದಾಳಿಗೆ ಇಬ್ಬರು ಬಲಿ; ಒಬ್ಬರಿಗೆ ಗಾಯ
Team Udayavani, Mar 28, 2023, 5:05 AM IST
ಸುರ್ಜಾಪುರ: ಛತ್ತೀಸಗಢದ ಸೂರಜ್ಪುರ್ ಜಿಲ್ಲೆಯ ಕಲಾಮಂಜನ್ ಗ್ರಾಮದ ಸಮೀಪದ ಕಾಡಿನಲ್ಲಿ ಸೋಮವಾರ ಹುಲಿ ದಾಳಿಗೆ ಇಬ್ಬರು ಮೃತಪಟ್ಟಿದ್ದು, ಒಬ್ಬರು ಗಾಯಗೊಂಡಿದ್ದಾರೆ.
ಕೈಲಾಶ್ ಸಿಂಗ್ ಹಾಗೂ ಸಮಯ್ ಲಾಲ್ ಮೃತರು. ರಾಯ್ ಸಿಂಗ್ ಎಂಬುವವರು ಗಾಯಗೊಂಡಿದ್ದಾರೆ.
ಈ ಮೂವರು ಕಟ್ಟಿಗೆ ಸಂಗ್ರಹಿಸಲು ಸೂರಜ್ಪುರ್ ಕಾಡಿಗೆ ತೆರಳಿದ್ದರು. ಕಟ್ಟಿಗೆ ಸಂಗ್ರಹಿಸುತ್ತಿದ್ದಾಗ ಅನಾಮತ್ತಾಗಿ ಹುಲಿ ಇವರ ಮೇಲೆ ಎರಗಿದೆ. ಕೂಡಲೇ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಅಂಬಿಕಾಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಇಬ್ಬರು ಮೃತಪಟ್ಟಿದ್ದಾರೆ.
ರಾಯ್ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಕುಟುಂಬಸ್ಥರಿಗೆ ಪರಿಹಾರ ನೀಡುವುದಾಗಿ ಸೂರಜ್ಪುರ್ ಜಿಲ್ಲಾಧಿಕಾರಿಗಳು ಘೋಷಿಸಿದ್ದಾರೆ. ಅಲ್ಲದೇ ಕಾಡಿಗೆ ತೆರಳದಂತೆ ಗ್ರಾಮಸ್ಥರನ್ನು ಎಚ್ಚರಿಸಿದ್ದಾರೆ.