INX ಮೀಡಿಯಾ ಪ್ರಕರಣದಲ್ಲಿ ಚಿದಂಬರಂಗೆ ಇಲ್ಲ ರಿಲೀಫ್; ಆಗಸ್ಟ್ 30ರವರೆಗೆ ಸಿಬಿಐ ಕಸ್ಟಡಿ
Team Udayavani, Aug 26, 2019, 6:40 PM IST
ನವದೆಹಲಿ:ಐಎನ್ ಎಕ್ಸ್ ಮೀಡಿಯಾ ಲಂಚ ಸ್ವೀಕಾರ ಪ್ರಕರಣದಲ್ಲಿ ಪಿ.ಚಿದಂಬರಂ ವಿಚಾರಣೆಯಲ್ಲಿ ಸಹಕಾರ ನೀಡುತ್ತಿಲ್ಲ. ಹೀಗಾಗಿ ಮತ್ತೆ ಐದು ದಿನಗಳ ಕಸ್ಟಡಿಗೆ ಒಪ್ಪಿಸಬೇಕೆಂಬ ಸಿಬಿಐ ಅಧಿಕಾರಿಗಳ ಮನವಿಯನ್ನು ಪುರಸ್ಕರಿಸಿರುವ ಸಿಬಿಐ ವಿಶೇಷ ಕೋರ್ಟ್, ಆಗಸ್ಟ್ 30ರವರೆಗೆ ಕಸ್ಟಡಿಯನ್ನು ಮುಂದುವರಿಸಿ ಆದೇಶ ನೀಡಿದೆ.
ಲಂಚ ಸ್ವೀಕಾರ ತನಿಖೆ ಪ್ರಕರಣದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಈ ನಿಟ್ಟಿನಲ್ಲಿ ಚಿದಂಬರಂಗೆ ಮತ್ತೆ ಐದು ದಿನಗಳ ಕಾಲ ಕಸ್ಟಡಿಗೆ ಒಪ್ಪಿಸಬೇಕೆಂದು ಸಿಬಿಐ ವಿಶೇಷ ಜಡ್ಜ್ ಅಜಯ್ ಕುಮಾರ್ ಕುಹಾರ್ ಅವರಲ್ಲಿ ಮನವಿ ಮಾಡಿಕೊಂಡಿತ್ತು. ಐಎನ್ ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಆಗಸ್ಟ್ 21ರಂದು ಸಿಬಿಐ ಚಿದಂಬರಂ ಅವರನ್ನು ಬಂಧಿಸಿತ್ತು. ಸಿಬಿಐ ವಿಶೇಷ ಕೋರ್ಟ್ ನಾಲ್ಕು ದಿನಗಳ ಕಾಲ ಕಸ್ಟಡಿಗೆ ಒಪ್ಪಿಸಿದ್ದು, ಸೋಮವಾರ ಅವಧಿ ಮುಕ್ತಾಯಗೊಂಡಿತ್ತು.
ಇದಕ್ಕೂ ಮುನ್ನ ಸೋಮವಾರ ಬೆಳಗ್ಗೆ ಐಎನ್ ಎಕ್ಸ್ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ತಿರಸ್ಕರಿಸಿದ ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು. ಅಲ್ಲದೇ ಸಿಬಿಐ ಕಸ್ಟಡಿ ವಿಚಾರದಲ್ಲಿ ಮಧ್ಯಪ್ರವೇಶಿಸಲ್ಲ. ಅಲ್ಲದೇ ರೆಗ್ಯುಲರ್ ಜಾಮೀನಿಗಾಗಿ ಸಿಬಿಐ ವಿಶೇಷ ಕೋರ್ಟ್ ಮೊರೆ ಹೋಗುವಂತೆ ಸೂಚಿಸಿತ್ತು.
ಮತ್ತೊಂದೆಡೆ ಐಎನ್ ಎಕ್ಸ್ ಪ್ರಕರಣದಲ್ಲಿ ಸದ್ಯ ಬಂಧಿಸದಂತೆ ಜಾರಿ ನಿರ್ದೇಶನಾಲಯಕ್ಕೆ ಸುಪ್ರೀಂಕೋರ್ಟ್ ಶುಕ್ರವಾರ ತಡೆ ನೀಡಿದ್ದು, ಮಂಗಳವಾರದವರೆಗೆ ಬಂಧಿಸದಂತೆ ನಿರ್ದೇಶನ ನೀಡಿದೆ.