G20 ಔತಣಕೂಟಕ್ಕೆ ಖರ್ಗೆ ಅವರಿಗೆ ಆಮಂತ್ರಣವಿಲ್ಲ: ರಾಹುಲ್ ಆಕ್ರೋಶ
Team Udayavani, Sep 8, 2023, 5:17 PM IST
ಹೊಸದಿಲ್ಲಿ: ‘ ವಿಶ್ವ ನಾಯಕರ ಜಿ20 ಔತಣಕೂಟಕ್ಕೆ ಎಐಸಿಸಿ ಅಧ್ಯಕ್ಷ, ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಮಂತ್ರಣ ನೀಡಿಲ್ಲ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಸರಕಾರದ ವಿರುದ್ಧ ಶುಕ್ರವಾರ ಆಕ್ರೋಶ ಹೊರ ಹಾಕಿದ್ದಾರೆ.
ಬ್ರಸೆಲ್ಸ್ನ ಬ್ರಸೆಲ್ಸ್ ಪ್ರೆಸ್ ಕ್ಲಬ್ನಲ್ಲಿ ಮಾಧ್ಯಮಗಳೊಂದಿಗೆ ಸಂವಾದ ನಡೆಸಿ, ‘ಔತಣಕೂಟಕ್ಕೆ ಖರ್ಗೆ ಅವರನ್ನು ಆಹ್ವಾನಿಸಲಾಗಿಲ್ಲ. ಭಾರತದ ಜನಸಂಖ್ಯೆಯ 60 ಪ್ರತಿಶತದಷ್ಟು ನಾಯಕರಿಗೆ ಸರಕಾರ ಬೆಲೆ ನೀಡುವುದಿಲ್ಲ.ಸರಕಾರದ ಕ್ರಮವು ಅದರ ಚಿಂತನೆಯ ಬಗ್ಗೆ ಹೇಳುತ್ತದೆ. ಜನರು ಇದರ ಹಿಂದೆ ಯಾವ ರೀತಿಯ ಆಲೋಚನೆ ಇದೆ ಎಂಬುದರ ಕುರಿತು ಯೋಚಿಸಬೇಕು” ಎಂದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಶ್ವ ನಾಯಕರ ಜಿ20 ಶೃಂಗಸಭೆಯ ಸ್ಥಳ ಭಾರತ್ ಮಂಟಪದಲ್ಲಿ ಶನಿವಾರ ಔತಣಕೂಟವನ್ನು ಆಯೋಜಿಸಲಿದ್ದಾರೆ.
“ರಾಹುಲ್ ಗಾಂಧಿಯವರು ಪ್ರಸ್ತುತ ಬೆಲ್ಜಿಯಂ, ಫ್ರಾನ್ಸ್ ಮತ್ತು ನಾರ್ವೆ ಯುರೋಪಿಯನ್ ತ್ರಿರಾಷ್ಟ್ರಗಳ ಪ್ರವಾಸದಲ್ಲಿದ್ದಾರೆ. ಗುರುವಾರ ಬ್ರಸೆಲ್ಸ್ನಲ್ಲಿ ಯುರೋಪಿಯನ್ ಪಾರ್ಲಿಮೆಂಟ್ (ಎಂಇಪಿ) ಕೆಲವು ಸದಸ್ಯರೊಂದಿಗೆ ಸಭೆಗಳನ್ನು ನಡೆಸಿದ್ದಾರೆ.