ದೇಶ ಸ್ವಾವಲಂಬಿಯಾಗಬೇಕು: ಮೋಹನ್ ಭಾಗವತ್
Team Udayavani, Aug 15, 2022, 9:28 PM IST
ಮುಂಬೈ: “ಭಾರತವು ಅತ್ಯಂತ ಕಠಿಣ ಹೋರಾಟದ ನಂತರ ಸ್ವಾತಂತ್ರ್ಯ ಪಡೆದುಕೊಂಡಿದೆ. ದೇಶವು ಸ್ವಾವಲಂಬಿಯಾಗಬೇಕಾದ ಅವಶ್ಯಕತೆಯಿದೆ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ಎಸ್ಎಸ್)ದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಮಹಾರಾಷ್ಟ್ರದ ನಾಗ್ಪುರದ ಆರ್ಎಸ್ಎಸ್ ಮುಖ್ಯ ಕಚೇರಿಯಲ್ಲಿ ಧ್ವಜಾರೋಹಣ ನಡೆಸಿ ಮಾತನಾಡಿದ ಅವರು, “ಯಾರು ಸ್ವತಂತ್ರವಾಗಿರಲು ಬಯಸುತ್ತಾರೋ ಅವರು ಮೊದಲು ಸ್ವಾವಲಂಬಿಗಳಾಗವೇಕು. ಬೇರೆ ರಾಷ್ಟ್ರಗಳೊಂದಿಗೆ ಸ್ನೇಹ ಸಂಪರ್ಕವಿರಬೇಕು. ಆದರೆ ಅಲ್ಲೂ ನೀವು ಸ್ವಾವಲಂಬಿಯಾಗಿರಬೇಕು. ನಮ್ಮದು ಬೇರೆಯವರ ಮೇಲೆ ಆಳ್ವಿಕೆ ಮಾಡುವ ದೇಶವಲ್ಲ, ಪ್ರೀತಿ ಹಂಚುವ ದೇಶ.
ವಿಶ್ವದ ಹಿತಾಸಕ್ತಿಗಾಗಿ ತ್ಯಾಗ ಮಾಡುವಂತಹ ರಾಷ್ಟ್ರ. ನಾವು ದೇಶದಿಂದ, ಸಮಾಜದಿಂದ ನಮಗೆ ಏನು ಸಿಕ್ಕಿತು ಎಂದು ಯೋಚಿಸಬಾರದು. ನಮ್ಮಿಂದ ಸಮಾಜಕ್ಕೆ ಏನು ಸಿಕ್ಕಿದೆ’ ಎಂದು ಯೋಚಿಸಬೇಕು ಎಂದು ಹೇಳಿದರು.