ಕೋವಿಡ್-19 ಸೋಂಕಿಗೆ ತಂದೆ ಸಾವು; 24 ಗಂಟೆಯೊಳಗೆ ಕರ್ತವ್ಯಕ್ಕೆ ಹಾಜರಾದ IAS ಅಧಿಕಾರಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿಯಾಗಿ ಐಎಎಸ್ ಅಧಿಕಾರಿ ನಿಕುಂಜಾ ಧಾಲ್ ಕರ್ತವ್ಯ ನಿರ್ವಹಿಸುತ್ತಿದ್ದರು
Team Udayavani, Mar 18, 2020, 1:21 PM IST
IAS officer Nikunja Dhal
ಭುವನೇಶ್ವರ್:ಕೊರೊನಾ ಮಹಾಮಾರಿಯಿಂದಾಗಿ ತಂದೆ ಸಾವನ್ನಪ್ಪಿದ್ದ 24ಗಂಟೆಯೊಳಗೆ ಕೋವಿಡ್-19 ವೈರಸ್ ಹರಡದಂತೆ ತಡೆಯುವ ನಿಟ್ಟಿನಲ್ಲಿ ಪುತ್ರ ಐಎಎಸ್ ಅಧಿಕಾರಿ ಕರ್ತವ್ಯಕ್ಕೆ ಹಾಜರಾಗುವ ಮೂಲಕ ಮಾದರಿ ಅಧಿಕಾರಿ ಎನಿಸಿಕೊಂಡ ಘಟನೆ ಒಡಿಶಾದಲ್ಲಿ ನಡೆದಿದೆ.
ಒಡಿಶಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿಯಾಗಿ ಐಎಎಸ್ ಅಧಿಕಾರಿ ನಿಕುಂಜಾ ಧಾಲ್ ಕರ್ತವ್ಯ ನಿರ್ವಹಿಸುತ್ತಿದ್ದರು. ಕೋವಿಡ್-19 ವೈರಸ್ ಗೆ ತುತ್ತಾಗಿ ತಂದೆ ನಿಧನರಾಗಿದ್ದರೂ ತಕ್ಷಣವೇ ಕಾರ್ಯಗಳನ್ನು ನೆರವೇರಿಸಿ, ಕರ್ತವ್ಯಕ್ಕೆ ಹಾಜರಾಗಿರುವುದಾಗಿ ವರದಿ ತಿಳಿಸಿದೆ.
ಜಾಗತಿಕವಾಗಿ ಕೋವಿಡ್ 19 ವೈರಸ್ ಗೆ 1,81,584 ಜನರಿಗೆ ತಗುಲಿದ್ದು, ಇನ್ನೂ ಹೆಚ್ಚು ಹಬ್ಬದಿರುವಂತೆ ತಡೆಯುವ ನಿಟ್ಟಿನಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೇತೃತ್ವದ ಸರ್ಕಾರ ಎಲ್ಲಾ ಸರ್ಕಾರಿ ಅಧಿಕಾರಿಗಳ ರಜೆಯನ್ನು ರದ್ದುಗೊಳಿಸಿ ಆದೇಶ ಕೂಡಾ ಹೊರಡಿಸಿದ್ದರು. ಭಾರತದಲ್ಲಿ 148 ಕೊರೊನಾ ವೈರಸ್ ಪ್ರಕರಣ ಪತ್ತೆಯಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ.
ಒಡಿಶಾದಲ್ಲಿ ಈವರೆಗೆ ಕೇವಲ ಒಂದು ಕೊರೊನಾ ವೈರಸ್ ಪ್ರಕರಣ ಪತ್ತೆಯಾಗಿದೆ. 1993ರ ಬ್ಯಾಚ್ ನ ಐಎಎಸ್ ಅಧಿಕಾರಿ ವೈಯಕ್ತಿಕ ನೆಲೆಯಲ್ಲಿ ರಜೆಯನ್ನು ತೆಗೆದುಕೊಂಡು ಬಳಿಕ 24 ಗಂಟೆಯೊಳಗೆ ಕರ್ತವ್ಯ ಹಾಜರಾಗಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿರುವುದಾಗಿ ವರದಿ ವಿವರಿಸಿದೆ.