ನೇತಾಜಿ ಜಯಂತಿಯಲ್ಲಿ ಸಿಆರ್ಪಿಎಫ್, ಐಟಿಬಿಪಿ ಭಾಗಿ
Team Udayavani, Jan 20, 2023, 7:21 PM IST
ಭುವನೇಶ್ವರ: ನೇತಾಜಿ ಸುಭಾಷ್ಚಂದ್ರ ಬೋಸ್ ಅವರ 126ನೇ ಜನ್ಮ ಜಯಂತಿ ಅಂಗವಾಗಿ ಶುಕ್ರವಾರ ಒಡಿಶಾ ಸರ್ಕಾರ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್ಪಿಎಫ್) ಮತ್ತು ಇಂಡೋ-ಟಿಬೇಟನ್ ಗಡಿ ಪೊಲೀಸ್(ಐಟಿಬಿಪಿ) ಪಡೆಗಳು ಭಾಗವಹಿಸಿದವು.
ನೇತಾಜಿ ಹುಟ್ಟೂರು ಕಥಕ್ನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ನೇತಾಜಿ ವಸ್ತು ಸಂಗ್ರಹಾಲಯದಿಂದ ಹೊರಡುವ ಬೃಹತ್ ಪ್ರಭಾತ್ ಫೇರಿ ಆನಂದ್ ಭವನ್ ವಸ್ತು ಸಂಗ್ರಹಾಲಯ ತಲುಪಿದೆ. ಈ ವೇಳೆ ಅಜಾದ್ ಹಿಂದ್ ಫೌಜ್ ಸ್ಮರಣಾರ್ಥ ವಿದ್ಯಾರ್ಥಿಗಳು ಇಂಡಿಯನ್ ನ್ಯಾಷನಲ್ ಆರ್ಮಿ(ಐಎನ್ಎ) ಸಮವಸ್ತ್ರ ಧರಿಸಿ ಭಾಗವಹಿಸಿದ್ದರು.
ಇನ್ನೊಂದೆಡೆ, ಒಳಾಂಗಣ ಕ್ರೀಡಾಂಗಣದಿಂದ ರಿಂಗ್ ರಸ್ತೆ ವರೆಗೆ ಓಟ ಹಾಗೂ ಇದೇ ಮಾರ್ಗದಲ್ಲಿ 10 ಕಿ.ಮೀ. ಸೈಕಲ್ ರ್ಯಾಲಿ ಆಯೋಜಿಸಲಾಗಿತ್ತು. ಜತೆಗೆ ಗಿಡ ನೆಡುವ ಅಭಿಯಾನ ಮತ್ತು ರಕ್ತದಾನ ಶಿಬಿರವೂ ನಡೆದಿದೆ.
ಶಹೀದ್ ಭವನದಲ್ಲಿ ಸಿಆರ್ಪಿಎಫ್ ಮತ್ತು ಐಟಿಬಿಪಿ ವತಿಯಿಂದ ಶಸ್ತ್ರಾಸ್ತ್ರ, ಮದ್ದು-ಗುಂಡುಗಳು ಮತ್ತು ವಿಶೇಷ ಅಸ್ತ್ರಗಳ ಪ್ರದರ್ಶನ ನಡೆದಿದೆ. ಅಲ್ಲದೇ ಭಾರತೀಯ ಅಂಚೆ ಇಲಾಖೆಯಿಂದ ವಿಶೇಷ ಅಂಚೆ ಚೀಟಿ ಪ್ರದರ್ಶನ ಏರ್ಪಡಿಸಲಾಗಿದೆ.