China ಆಕ್ರಮಣಕಾರಿ ವರ್ತನೆ: ಎಲ್ಎಸಿಯಲ್ಲಿ ಕಟ್ಟೆಚ್ಚರ ವಹಿಸಲು ಸೇನೆಗೆ ಸೂಚನೆ
Team Udayavani, Apr 20, 2023, 7:17 AM IST
ಹೊಸದಿಲ್ಲಿ: ಭಾರತದ ಉತ್ತರ ವಲಯದಲ್ಲಿ ಚೀನದ ಸೇನಾಪಡೆ (ಪೀಪಲ್ಸ್ ಲಿಬರೇಶನ್ ಆರ್ಮಿ) ನಿಯೋ ಜನೆಯಿಂದಾಗಿ ಪರಿಸ್ಥಿತಿ ಉದ್ವಿಗ್ನವಾಗಿದೆ. ನಮ್ಮ ಸಶಸ್ತ್ರ ಪಡೆಗಳು, ವಿಶೇಷವಾಗಿ ಭಾರತೀಯ ಸೇನೆಯು ಭದ್ರತೆ ಯನ್ನು ಕಾಪಾಡಿಕೊಳ್ಳಲು ನೈಜ ಗಡಿ ನಿಯಂತ್ರಣ ರೇಖೆ (ಎಲ್ಎಸಿ) ಉದ್ದಕ್ಕೂ ನಿರಂತರವಾಗಿ ಜಾಗರೂಕವಾಗಿ ಇರಬೇಕು ಎಂದು ರಕ್ಷಣ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಹೊಸದಿಲ್ಲಿಯಲ್ಲಿ ನಡೆಯುತ್ತಿರುವ ಸೇನಾ ಕಮಾಂಡರ್ಗಳ ಸಮಾವೇಶದಲ್ಲಿ ಬುಧವಾರ ಭಾಗವ ಹಿಸಿ ಮಾತನಾಡಿದ ಅವರು, “ಸಶಸ್ತ್ರ ಪಡೆಗಳು ಪ್ರಪಂಚಾ ದ್ಯಂತ ಜರಗುವ ಭೌಗೋಳಿಕ-ರಾಜಕೀಯ ಬದಲಾ ವಣೆಗಳನ್ನು ಗಮನಿಸುತ್ತಿರಬೇಕು. ಅದಕ್ಕೆ ಅನುಗುಣವಾಗಿ ತಮ್ಮ ಯೋಜನೆ ಮತ್ತು ಕಾರ್ಯತಂತ್ರಗಳನ್ನು ರೂಪಿಸ ಬೇಕು’ ಎಂದು ಸಲಹೆ ನೀಡಿದರು.
ಭಾರತದ ಗಡಿಭಾಗದಲ್ಲಿ ಚೀನ ತನ್ನ ರಾಕೆಟ್ ಸಜ್ಜಿತ ಸೇನೆಯನ್ನು ಸನ್ನದ್ಧ ಸ್ಥಿತಿಯಲ್ಲಿಟ್ಟಿದೆ. ಅದಕ್ಕೆ ಪ್ರತಿಯಾಗಿ ಭಾರತವೂ ಗಡಿಯಲ್ಲಿ ರಾಕೆಟ್ಗಳನ್ನು ಭಾರೀ ಪ್ರಮಾಣದಲ್ಲಿ ನಿಯೋಜಿಸಲು ಪೂರ್ಣವ್ಯವಸ್ಥೆ ಮಾಡಿಕೊಂಡಿದೆ. ಇತ್ತೀಚೆಗೆ ಭಾರತ-ಭೂತಾನ್-ಚೀನ ನಡುವೆ ಬರುವ ಡೋಕ್ಲಾಂ ಸನಿಹ ಚೀನ ಸಾವಿರಾರು ಸೈನಿಕರನ್ನು ನಿಯೋಜಿಸಿದ್ದೂ ಕೂಡ ಪತ್ತೆಯಾಗಿದೆ. ಇವೆಲ್ಲದರ ನಡುವೆ ಪೂರ್ವ ಲಡಾಖ್ನಲ್ಲಿ ಪದೇಪದೆ ಚೀನ ಕ್ಯಾತೆ ತೆಗೆಯುತ್ತಿರುವ ಹಿನ್ನೆಲೆಯಲ್ಲಿ ರಕ್ಷಣ ಸಚಿವರ ಈ ಹೇಳಿಕೆ ಮಹತ್ವದ್ದಾಗಿದೆ.
ಪ್ರತಿಯೊಬ್ಬ ಸೈನಿಕನಿಗೂ ಅತ್ಯುತ್ತಮ ಶಸ್ತ್ರಾಸ್ತ್ರ: “ದೇಶದ ಭದ್ರತೆಯೇ ಕೇಂದ್ರ ಸರಕಾರದ ಅತ್ಯಂತ ಆದ್ಯತೆಯ ವಿಷಯವಾಗಿದೆ. ಗಡಿಯಲ್ಲಿ ನಿಯೋಜಿಸಲಾದ ಪ್ರತಿ ಯೊಬ್ಬ ಸೈನಿಕನಿಗೂ ಅತ್ಯುತ್ತಮ ಶಸ್ತ್ರಾಸ್ತ್ರ ಮತ್ತು ಸೌಲಭ್ಯಗಳನ್ನು ಸರಕಾರ ಒದಗಿಸಲಿದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ’ ಎಂದು ರಾಜನಾಥ್ ಸಿಂಗ್ ಹೇಳಿದರು.
ದೇಶ ವಿರೋಧಿ ಸಂಘಟನೆಗಳ ಬಗ್ಗೆ ಜಾಗರೂಕರಾಗಿ: “ಜಮ್ಮು ಮತ್ತು ಕಾಶ್ಮೀರದಲ್ಲಿ ನಿಧಾನವಾಗಿ ಶಾಂತಿ ಮತ್ತು ಸ್ಥಿರತೆ ನೆಲೆಸುತ್ತಿದೆ. ಇಲ್ಲಿ ಭಯೋತ್ಪಾದಕ ಚುಟುವಟಿಕೆಗಳ ಸಂಖ್ಯೆ ಗಮನಾರ್ಹವಾಗಿ ತಗ್ಗಿದೆ. ಭಾರತೀಯ ಸೇನೆ ನಡೆಸಿದ ಸರಣಿ ಕಾರ್ಯಾಚರಣೆಗಳಿಂದ ಈಶಾನ್ಯ ರಾಜ್ಯ ಗಳಲ್ಲಿ ಆಂತರಿಕ ಭದ್ರತೆಯಲ್ಲಿ ದೊಡ್ಡ ಪ್ರಮಾಣದ ಸುಧಾರಣೆಯಾಗಿದೆ. ಆದಾಗ್ಯೂ ಶಾಂತಿಗಾಗಿ ಸರಕಾ ರದ ಪ್ರಯತ್ನಗಳಿಗೆ ಸವಾಲೊಡ್ಡುವ ದೇಶ ವಿರೋಧಿ ಸಂಘಟನೆಗಳ ಬಗ್ಗೆ ನಾವು ಜಾಗರೂಕರಾಗಿಬೇಕು’ ಎಂದರು.
ಸೋಮವಾರ ಆರಂಭವಾದ ಸೇನಾ ಕಮಾಂಡರ್ಗಳ ಸಮಾವೇಶವು ಒಟ್ಟು ಐದು ದಿನಗಳ ಕಾಲ ನಡೆಯಲಿದೆ. ಪ್ರತೀ ವರ್ಷ ಎಪ್ರಿಲ್ ಮತ್ತು ಅಕ್ಟೋಬರ್ನಲ್ಲಿ ಈ ಸಮಾವೇಶ ನಡೆಯುತ್ತದೆ.
ಬಲೂಚಿಸ್ಥಾನದಲ್ಲಿ ಪಾಕ್, ಚೀನ ಟವರ್ಗಳು ಧ್ವಂಸ
ಹೊಸದಿಲ್ಲಿ: ಪಾಕಿಸ್ಥಾನದ ಬಲೂಚಿಸ್ಥಾನ್ ಪ್ರಾಂತದಲ್ಲಿ ಚೀನ ಮತ್ತು ಪಾಕ್ ಕಂಪೆನಿಗಳಿಗೆ ಸೇರಿದ ಆರು ಮೊಬೈಲ್ ಟವರ್ಗಳನ್ನು ಬಲೂಚಿಸ್ಥಾನ್ ಲಿಬರೇಶನ್ ಫ್ರಂಟ್(ಬಿಎಲ್ಎ) ಧ್ವಂಸಗೊಳಿಸಿದೆ. ಈ ಮೊಬೈಲ್ ಟವರ್ಗಳು ಬಲೂಚಿಸ್ಥಾನದ ಚೀನ-ಪಾಕಿಸ್ಥಾನ ಆರ್ಥಿಕ ಕಾರಿಡಾರ್ ಪ್ರದೇಶದಲ್ಲಿ ಸ್ಥಾಪಿಸಲಾಗಿತ್ತು. ಇದರೊಂದಿಗೆ ಪ್ರತ್ಯೇಕತಾವಾದಿ ಬಲೂಚಿಸ್ಥಾನ ಹೋರಾಟ ಮತ್ತೆ ಜೋರಾಗಿದೆ. ಬಲೂಚಿಸ್ಥಾನದ ಕಛ… ಜಿಲ್ಲೆಯ ದಶ್¤ ತಾಲೂಕಿನಲ್ಲಿ ಚೀನಾದ “ಜೋಂಗ್’ ಕಂಪೆನಿ ಹಾಗೂ ಪಾಕಿಸ್ಥಾನದ “ಯುಫೋನ್’ ಕಂಪೆನಿಗಳು ಮೊಬೈಲ್ ನೆಟ್ವರ್ಕ್ ಟವರ್ಗಳನ್ನು ಸ್ಥಾಪಿಸಿತ್ತು. ತಮ್ಮ ಬೇಹುಗಾರಿಕ ಜಾಲಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ಪಾಕಿಸ್ಥಾನ ಮತ್ತು ಚೀನ ಬಲೂಚಿಸ್ಥಾನದಲ್ಲಿ ಸೆಲ್ ಫೋನ್ ಟವರ್ಗಳನ್ನು ಸ್ಥಾಪಿಸಿದೆ. ಇದನ್ನು ಬಳಸಿ ಬಲೂಚಿಸ್ಥಾನದ ನಾಗರಿಕರ ಮೇಲೆ ನಿಗಾ ವಹಿಸಲಾಗುತ್ತದೆ. ಬಲೂಚಿಸ್ಥಾನ್ ಲಿಬರೇಶನ್ ಫ್ರಂಟ್ ಉಗ್ರರು ಮಂಗಳವಾರ ಈ ರೀತಿಯ ಆರು ಸೆಲ್ ಫೋನ್ ಟವರ್ಗಳನ್ನು ಧ್ವಂಸಗೊಳಿಸಿದ್ದಾರೆ. 2021ರ ಜೂನ್ನಲ್ಲಿ ದೂರಸಂಪರ್ಕ ಕಂಪೆನಿಗಳ ಆರು ಉದ್ಯೋಗಿಗಳನ್ನು ಬಿಎಲ್ಎ ಅಪಹರಣ ಮಾಡಿತ್ತು. ಅಲ್ಲದೇ ಅವರ ಕಚೇರಿಗೆ ಬೆಂಕಿ ಹಚ್ಚಿತ್ತು.