ಯೋಧರಿಗೆ ನಾಲ್ಕು ಕಂತುಗಳಲ್ಲಿ ಪಿಂಚಣಿ: ಸಿಟ್ಟಾದ ಸರ್ವೋಚ್ಚ ಪೀಠ
ಆದೇಶ ಮೀರಿ ಅಧಿಸೂಚನೆ ಹೊರಡಿಸಿದ್ದೇಕೆ: ಪ್ರಶ್ನೆ
Team Udayavani, Mar 14, 2023, 7:32 AM IST
ನವದೆಹಲಿ: ನಿವೃತ್ತ ಯೋಧರಿಗೆ ಒಂದು ಶ್ರೇಣಿ-ಒಂದು ಪಿಂಚಣಿ (ಒಆರ್ಒಪಿ) ಅನ್ವಯ ಪಾವತಿಸಬೇಕಿರುವ ಬಾಕಿ ಮೊತ್ತವನ್ನು 4 ಕಂತುಗಳಲ್ಲಿ ಪಾವತಿಸುವುದಾಗಿ ಅಧಿಸೂಚನೆ ಹೊರಡಿಸಿರುವ ರಕ್ಷಣಾ ಸಚಿವಾಲಯವನ್ನು; ಸರ್ವೋಚ್ಚ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ.
ಕಾನೂನನ್ನು ಕೈಗೆ ತೆಗೆದುಕೊಳ್ಳುವ ಅಧಿಕಾರ ಸಚಿವಾಲಯಕ್ಕಿಲ್ಲ ಎಂದು ಕಟುವಾಗಿ ಹೇಳಿದೆ. ರಕ್ಷಣಾ ಸಚಿವಾಲಯದ ಅಧಿಸೂಚನೆಯನ್ನು ರದ್ದುಗೊಳಿಸುವಂತೆ ಕೋರಿ, ಭಾರತದ ನಿವೃತ್ತ ಸೇನಾಧಿಕಾರಿಗಳ ಆಂದೋಲನ (ಐಇಎಸ್ಎಂ) ಪರ ವಕೀಲ ಬಾಲಾಜಿ ಶ್ರೀನಿವಾಸನ್ ಸಲ್ಲಿಸಿರುವ ಅರ್ಜಿಯನ್ನು ಸಿಜೆಐ ಡಿ.ವೈ. ಚಂದ್ರಚೂಡ್ ಅವರ ನೇತೃತ್ವದ ನ್ಯಾಯಪೀಠ ವಿಚಾರಣೆ ನಡೆಸಿತು.
ಹಿಂದಿನ ವಿಚಾರಣೆ ವೇಳೆ ಸರ್ವೋಚ್ಚ ಪೀಠ, ಒಆರ್ಒಪಿ ಸಂಪೂರ್ಣ ಬಾಕಿ ಪಾವತಿಸಲು ಮಾ.15ರವರೆಗೆ ಸುಪ್ರೀಂಕೋರ್ಟ್ ಗಡುವು ನೀಡಿತ್ತು. ನ್ಯಾಯಾಲಯ ಗಡುವು ನೀಡಿದ ನಡುವೆಯೇ, ರಕ್ಷಣಾ ಸಚಿವಾಲಯದ ಕಾರ್ಯದರ್ಶಿ, 4 ಕಂತುಗಳಲ್ಲಿ ಬಾಕಿ ಪಾವತಿಸುವ ಅಧಿಸೂಚನೆ ಹೊರಡಿಸಿದ್ದಾರೆ. ಇದು ಸರಿಯಲ್ಲ. ಕಾನೂನು ಕೈಗೆ ತೆಗೆದುಕೊಳ್ಳುವ ಹಕ್ಕು ಸಚಿವಾಲಯಕ್ಕಿಲ್ಲ ಎಂದಿದೆ.
4 ಲಕ್ಷ ಪಿಂಚಣಿದಾರರ ಸಾವು: ಬಾಕಿ ಪಾವತಿಯ ಪ್ರಮಾಣ, ಆದ್ಯತೆ ಹಾಗೂ ವಿಧಾನದ ಕುರಿತು ಶೀಘ್ರವೇ ಪಟ್ಟಿ ತಯಾರಿಸಿ ನೀಡುವಂತೆ ಸೂಚಿಸಿದ್ದಲ್ಲದೇ, ವ್ಯಾಜ್ಯ ಶುರುವಾಗಿನಿಂದ 4 ಲಕ್ಷ ಪಿಂಚಣಿದಾರರು ಮೃತಪಟ್ಟಿದ್ದಾರೆ. ಶೀಘ್ರವೇ ಇದನ್ನು ಬಗೆಹರಿಸಬೇಕೆಂದು ಕಳವಳ ವ್ಯಕ್ತಪಡಿಸಿದೆ.