ಮಾನನಷ್ಟ ಮೊಕದ್ದಮೆ ಕೇಸ್; ಕೇಜ್ರಿವಾಲ್, ಸಿಸೋಡಿಯಾಗೆ ದೆಹಲಿ ಕೋರ್ಟ್ ಜಾಮೀನು
Team Udayavani, Jul 16, 2019, 2:35 PM IST
ನವದೆಹಲಿ: ಭಾರತೀಯ ಜನತಾ ಪಕ್ಷದ ಮುಖಂಡ ವಿಜೇಂದ್ರ ಗುಪ್ತಾ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಡಿಸಿಎಂ ಮನೀಷ್ ಸಿಸೋಡಿಯಾಗೆ ದೆಹಲಿ ವಿಶೇಷ ನ್ಯಾಯಾಲಯ ಮಂಗಳವಾರ ಜಾಮೀನು ನೀಡಿದೆ.
ಆಮ್ ಆದ್ಮಿ ಪಕ್ಷದ ಇಬ್ಬರು ಮುಖಂಡರಿಗೆ ತಲಾ 10 ಸಾವಿರ ರೂಪಾಯಿ ಬಾಂಡ್ ಆಧಾರದ ಮೇಲೆ ವಿಶೇಷ ಕೋರ್ಟ್ ಜಾಮೀನು ಮಂಜೂರು ಮಾಡಿರುವುದಾಗಿ ವರದಿ ತಿಳಿಸಿದೆ. ಅಲ್ಲದೇ ಮಾನನಷ್ಟ ಪ್ರಕರಣದ ವಿಚಾರಣೆಯನ್ನು ಜುಲೈ 25ಕ್ಕೆ ಮುಂದೂಡಿದೆ.
ತಮ್ಮನ್ನು ಕೊಲ್ಲಲು ವಿಜೇಂದ್ರ ಗುಪ್ತಾ ಸಂಚು ನಡೆಸಿದ್ದಾರೆಂದು ಆರೋಪಿಸಿದ್ದ ಕೇಜ್ರಿವಾಲ್ ಮತ್ತು ಸಿಸೋಡಿಯಾ ವಿರುದ್ಧ ವಿಜೇಂದ್ರ ಗುಪ್ತಾ ಕೋರ್ಟ್ ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಇದೊಂದು ಸುಳ್ಳು ಆರೋಪ, ಹೀಗಾಗಿ ಮಾನನಷ್ಟ ಮೊಕದ್ದಮೆ ದಾಖಲಿಸಬೇಕೆಂದು ಗುಪ್ತಾ ಅರ್ಜಿಯಲ್ಲಿ ತಿಳಿಸಿದ್ದರು.