12ನೇ ತರಗತಿ ಪಾಸಾದವನನ್ನು PM ಮಾಡಬೇಡಿ: ಕೇಜ್ರಿವಾಲ್ ಬುದ್ಧಿವಾದ
Team Udayavani, Feb 14, 2019, 6:06 AM IST
ಹೊಸದಿಲ್ಲಿ : ‘2019ರ ಲೋಕಸಭಾ ಚುನಾವಣೆಯಲ್ಲಿ 12ನೇ ತರಗತಿ ಪಾಸಾದ ವ್ಯಕ್ತಿಯನ್ನು ದೇಶದ ಅತ್ಯುನ್ನತ ಪ್ರಧಾನಿ ಹುದ್ದೆಗೆ ಚುನಾಯಿಸಿಬೇಡಿ’ ಎಂದು ದಿಲ್ಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ದೇಶದ ಜನರಿಗೆ ಬುದ್ಧಿವಾದ ಹೇಳಿದ್ದಾರೆ.
ಐತಿಹಾಸಿಕ ಜಂತರ್ ಮಂತರ್ ನಲ್ಲಿ ನಡೆದ ವಿಪಕ್ಷಗಳ ಬೃಹತ್ ರಾಲಿಯಲ್ಲಿ ಕೇಜ್ರಿವಾಲ್ ಈ ರೀತಿ ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪೂರ್ಣ ಪ್ರಮಾಣದ ವಾಕ್ ಪ್ರಹಾರ ನಡೆಸಿದ್ದಾರೆ.
‘ಕಳೆದ 2014ರಲ್ಲಿ ದೇಶದ ಜನರು 12ನೇ ತರಗತಿ ಪಾಸಾದ ವ್ಯಕ್ತಿಯನ್ನು ಪ್ರಧಾನಿಯಾಗಿ ಮಾಡಿ ತಪ್ಪೆಸಗಿದರು. ಈ ಬಾರಿ ಅವರು ಮತ್ತೆ ಅದೇ ತಪ್ಪನ್ನು ಮಾಡಬಾರದು; ಹನ್ನೆರಡನೇ ತರಗತಿ ಪಾಸಾಗಿ ಪ್ರಧಾನಿಯಾದ ವಕ್ತಿಗೆ ತಾನು ಎಲ್ಲಿ ಸಹಿ ಮಾಡಬೇಕು, ಎಲ್ಲಿ ಮಾಡಬಾರದು ಎಂದೇ ಗೊತ್ತಿಲ್ಲ’ ಎಂದು ವ್ಯಂಗ್ಯವಾಡಿದ ಆಪ್ ಮುಖ್ಯಸ್ಥ ಕೇಜ್ರಿವಾಲ್, ಪ್ರಧಾನಿ ನರೇಂದ್ರ ಮೋದಿ ಅವರು ರಫೇಲ್ ಫೈಟರ್ ಜೆಟ್ ಡೀಲ್ನಲ್ಲಿ ಭಾರೀ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆರೋಪಿಸಿದರು.
ತಾನಾಶಾಹಿ ಹಟಾವೋ, ಲೋಕತಂತ್ರ ಬಚಾವೋ ರಾಲಿಯಲ್ಲಿ ವಿಪಕ್ಷ ನಾಯಕರಾದ ಮಮತಾ ಬ್ಯಾನರ್ಜಿ, ಶರದ್ ಪವಾರ್, ಚಂದ್ರಬಾಬು ನಾಯ್ಡು ಅವರೆದು ಸ್ಫೂರ್ತಿಯುತವಾಗಿ ಮಾತನಾಡಿದ ಕೇಜ್ರಿವಾಲ್, ಈ ಪ್ರತಿಭಟನಾ ರಾಲಿಯು ನರೇಂದ್ರ ಮೋದಿ ಸರಕಾರದ ಮೂಲೋತ್ಪಾಟನೆ ಮಾಡಲಿದೆ ಎಂದು ಗುಡುಗಿದರು.