ಕಾಲೇಜು ಆವರಣದಲ್ಲಿ ನಡೆದುಕೊಂಡು ಹೋಗುವಾಗ ಕುಸಿದು ಬಿದ್ದು ವಿದ್ಯಾರ್ಥಿ ಮೃತ್ಯು
ತೆಲಂಗಾಣದಲ್ಲಿ ಈ ವರ್ಷ ನಡೆದ ಮೂರನೇ ಕಾರ್ಡಿಯಕ್ ಅರೆಸ್ಟ್ ಘಟನೆ ಆಗಿದೆ.
Team Udayavani, Mar 4, 2023, 12:32 PM IST
ಹೈದರಾಬಾದ್: ಹೃದಯಾಘಾತ ಪ್ರಕರಣಗಳು ದಿನ ಕಳೆದಂತೆ ಹೆಚ್ಚಾಗುತ್ತಿದೆ. ಯುವ ಜನರು ವಯಸ್ಸಲ್ಲದ ವಯಸ್ಸಿನಲ್ಲಿ ಹೃದಯಾಘಾತದಂತಹ ಗಂಭೀರ ಸಮಸ್ಯೆಗೆ ಒಳಗಾಗಿ ಮೃತಪಡುತ್ತಿದ್ದಾರೆ. ಇಂಥದ್ದೇ ಮತ್ತೊಂದು ಅಘಾತಕಾರಿ ಘಟನೆ ತೆಲಂಗಾಣದಲ್ಲಿ ನಡೆದಿದೆ.
ತೆಲಂಗಾಣದ ಗುಂಡ್ಲಾ ಪೋಚಂಪಲ್ಲಿಯಲ್ಲಿರುವ ಎಂಆರ್ ಇಂಜಿನಿಯರಿಂಗ್ ಕಾಲೇಜಿನ ಪ್ರಥಮ ವರ್ಷದ ಇಂಜಿನಿಯರ್ ವಿದ್ಯಾರ್ಥಿ ಸಚಿನ್ (18) ಶುಕ್ರವಾರ ಮಧ್ಯಾಹ್ನ ಎಂದಿನಂತೆ ಕಾಲೇಜಿನಲ್ಲಿ ಊಟ ಮುಗಿಸಿ, ಮೊದಲ ತರಗತಿಯನ್ನು ಮುಗಿಸಿ ಸ್ನೇಹಿತನೊಟ್ಟಿಗೆ ಕಾಲೇಜಿನ ಆವರಣದಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಸಚಿನ್ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ.
ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿ ಮತ್ತೆ ಹಿಂದೂ ದೇಗುಲ ಧ್ವಂಸ: 2 ತಿಂಗಳ ಅವಧಿಯಲ್ಲಿ ನಡೆದ ನಾಲ್ಕನೇ ಘಟನೆ
ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಆದಾಗಲೇ ಅವರು ಕಾರ್ಡಿಯಕ್ ಅರೆಸ್ಟ್ (ಹೃದಯ ಸ್ತಂಭನ) ನಿಂದ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಿದ್ದು, ಸ್ನೇಹಿತರು ಸೇರಿದಂತೆ ಕಾಲೇಜಿನ ವಿದ್ಯಾರ್ಥಿ ವರ್ಗ ಸಚಿನ್ ಹಠಾತ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ಇದು ತೆಲಂಗಾಣದಲ್ಲಿ ಈ ವರ್ಷ ನಡೆದ ಅಂದರೆ ಇತ್ತೀಚೆಗೆ ನಡೆದ ಮೂರನೇ ಕಾರ್ಡಿಯಕ್ ಅರೆಸ್ಟ್ ಘಟನೆ ಆಗಿದೆ. ಕಳೆದ ಕೆಲ ದಿನಗಳ ಹಿಂದೆ ಬ್ಯಾಡ್ಮಿಂಟನ್ ಆಡುವಾಗಕೇ ಯುವಕ ಕುಸಿದು ಬಿದ್ದು ಮೃತಪಟ್ಟಿದ್ದ, ಇದಕ್ಕೂ ಮುನ್ನ ಮದುವೆಯಲ್ಲಿ ನೃತ್ಯ ಮಾಡುವ ವೇಳೆ ಯುವಕನೊಬ್ಬ ಕುಸಿದು ಬಿದ್ದು ಸಾವನ್ನಪ್ಪಿದ್ದ.