4 ವರ್ಷ ಬಳಿಕ ಕೊಲೆ ರಹಸ್ಯ ಬಯಲು; ಪ್ರಿಯಕರನ ಜತೆ ಸೇರಿ ಪತಿಯ ಹತ್ಯೆ
ಏಳು ಅಡಿ ಗುಂಡಿ ತೆಗೆದು ಮೃತ ಶರೀರ ಹೂಳಿದರು
Team Udayavani, Nov 15, 2022, 7:50 AM IST
ಗಾಜಿಯಾಬಾದ್: ಪ್ರಿಯಕರನೊಂದಿಗೆ ಸೇರಿಕೊಂಡು ಪತಿಯ ಕೊಲೆ ಮಾಡಿ, ಅದು ಯಾರಿಗೂ ತಿಳಿಯದಂತೆ ಏಳು ಅಡಿ ಆಳದ ಗುಂಡಿಯಲ್ಲಿ ಹೂತು ಹಾಕಿದ್ದ ಪತ್ನಿಯನ್ನು ಗಾಜಿಯಾಬಾದ್ ಪೊಲೀಸರು ಬಂಧಿಸಿದ್ದಾರೆ. ನಾಲ್ಕು ವರ್ಷದ ನಂತರ ಪೊಲೀಸರು ಈ ಕೊಲೆ ಪ್ರಕರಣವನ್ನು ಭೇದಿಸಿದ್ದಾರೆ.
ನವದೆಹಲಿಯಲ್ಲಿ ಯುವಕನೊಬ್ಬ ತನ್ನ ಜತೆ ವಾಸವಿದ್ದ ಯುವತಿಯನ್ನು ಕೊಲೆ ಮಾಡಿ, ದೇಹವನ್ನು 32 ಭಾಗಗಳಾಗಿ ತುಂಡರಿಸಿ, 18 ದಿನಗಳ ಕಾಲ ಮಧ್ಯರಾತ್ರಿ ಅದನ್ನು ಕಾಡಿಗೆ ಹೋಗಿ ಎಸೆಯುತ್ತಿದ್ದ ಘಟನೆ ಬೆನ್ನಲ್ಲೇ ಈ ಪ್ರಕರಣ ಬೆಳಕಿಗೆ ಬಂದಿದೆ.
ಗಾಜಿಯಾಬಾದ್ ಪ್ರಕರಣದಲ್ಲಿ, ತನ್ನ ಪತಿ ಚಂದ್ರ ವೀರ್ ಕಾಣೆಯಾಗಿರುವ ಬಗ್ಗೆ ಪತ್ನಿ ಸವಿತಾ 2018ರಲ್ಲಿ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿದ್ದಳು. ಈ ವೇಳೆ ಮೈದುನನೇ ಈ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಿದ್ದಳು.
ಆದರೆ ಪತ್ನಿಯ ಬಗ್ಗೆ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ನಾಲ್ಕು ವರ್ಷಗಳ ನಂತರ ಮರುತನಿಖೆಗೆ ಅಪರಾಧ ದಳದ ಪೊಲೀಸರು ಮುಂದಾದರು.
ಘಟನೆ ಹಿನ್ನೆಲೆ:
ಸವಿತಾ ತನ್ನ ಪ್ರಿಯಕರ ಅರುಣ್ನೊಂದಿಗೆ ಸೇರಿಕೊಂಡು ಗಂಡನನ್ನು ಗುಂಡಿಕ್ಕಿ ಸಾಯಿಸಿದ್ದಾರೆ. ನಂತರ ಅರುಣ್ ಮನೆಯಲ್ಲಿ ಮೊದಲೇ ತೆಗೆದಿದ್ದ 7 ಅಡಿ ಗುಂಡಿಯಲ್ಲಿ ಮೃತದೇಹವನ್ನು ಹಾಕಿ, ಮುಚ್ಚಿ ಸಿಮೆಂಟ್ ಪ್ಲೋರಿಂಗ್ ಮಾಡಿದ್ದಾರೆ. ಅಲ್ಲದೇ ಅರುಣ್ ಅದೇ ಮನೆಯಲ್ಲಿ ವಾಸವಿದ್ದ.
ಪೊಲೀಸರು ಸೋಮವಾರ ಗುಂಡಿ ಅಗೆದು, ಮೃತದೇಹದ ಅಸ್ಥಿಪಂಜರವನ್ನು ಹೊರಕ್ಕೆ ತೆಗೆದಿದ್ದಾರೆ. ಜತಗೆ ಸ್ಥಳದಲ್ಲಿ ಕೊಲೆಗೆ ಬಳಸಿದ ಪಿಸ್ತುಲ್ ಮತ್ತು ಕೊಡಲಿ ಸಿಕ್ಕಿದೆ. ಪೊಲೀಸರು ಸವಿತಾ ಮತ್ತು ಆಕೆಯ ಪಿಯಕರ ಅರುಣ್ನನ್ನು ಬಂಧಿಸಿದ್ದಾರೆ.