ರಾತ್ರಿ ಹೋದ ಬಾಲಕಿಯರು ಬೆಳಗ್ಗೆ ಬಂದು ಅಳುತ್ತಿದ್ದರು!
Team Udayavani, Aug 7, 2018, 10:07 AM IST
ಲಕ್ನೋ: ಬಿಹಾರದ ಮುಜಾಫರ್ಪುರ ಬಾಲಿಕಾ ಗೃಹದಲ್ಲಿ 30ಕ್ಕೂ ಹೆಚ್ಚು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದ ಬೆನ್ನಿಗೇ ಉತ್ತರಪ್ರದೇಶದಲ್ಲೂ ಇಂಥದ್ದೇ ಘಟನೆಯೊಂದು ಬಹಿರಂಗವಾಗಿದೆ. ಇಲ್ಲಿನ ದಿಯೋರಿಯಾದಲ್ಲಿನ ಮಾ ವಿದ್ಯಾವಾಸಿನಿ ಆಶ್ರಯ ಗೃಹದಲ್ಲೂ ಬಾಲಕಿಯರ ಮೇಲೆ ನಿರಂತರ ಅತ್ಯಾಚಾರ, ಲೈಂಗಿಕ ಕಿರುಕುಳ ಪ್ರಕರಣಗಳು ನಡೆಯುತ್ತಿದ್ದ ವಿಚಾರವನ್ನು 10 ವರ್ಷದ ಬಾಲಕಿಯೊಬ್ಬಳು ಬಾಯಿಬಿಟ್ಟಿದ್ದಾಳೆ. ಈ ಹಿನ್ನೆಲೆಯಲ್ಲಿ ಪೊಲೀಸರು ಅಲ್ಲಿಗೆ ಧಾವಿಸಿ, 24 ಬಾಲಕಿಯರನ್ನು ರಕ್ಷಿಸಿದ್ದಾರೆ. ಆದರೆ, ಅಲ್ಲಿದ್ದ ಇತರೆ 18 ಬಾಲಕಿಯರು ನಾಪತ್ತೆಯಾಗಿದ್ದಾರೆ.
ರಾತ್ರಿ ಆಶ್ರಯ ಗೃಹಕ್ಕೆ ಲಕ್ಸುರಿ ಕಾರುಗಳು ಬರುತ್ತಿದ್ದವು. ಅದರಲ್ಲಿ ಬಂದವರು ರಾತ್ರಿಯೇ ಇಲ್ಲಿದ್ದ ಹೆಣ್ಣುಮಕ್ಕಳನ್ನು ಕಾರಿನಲ್ಲಿ ಕರೆದೊಯ್ಯುತ್ತಿದ್ದರು. ಹೋಗುವಾಗ ಚೆನ್ನಾಗಿ ಡ್ರೆಸ್ ಮಾಡುವಂತೆ ಆದೇಶಿಸುತ್ತಿದ್ದರು. ಬೆಳಗ್ಗೆ ವಾಪಸಾ ಗುತ್ತಿದ್ದ ಈ ಹುಡುಗಿಯರು, ಹಗಲೆಲ್ಲಾ ಅಳುತ್ತಾ ಕುಳಿತಿರುತ್ತಿದ್ದರು ಎಂದು ಇತ್ತೀಚೆಗಷ್ಟೇ ಅಲ್ಲಿಂದ ತಪ್ಪಿಸಿ ಕೊಂಡು ಬಂದ ಬಾಲಕಿ ಹೇಳಿದ್ದಾಳೆ.
ಘಟನೆ ಬಹಿರಂಗವಾಗುತ್ತಿದ್ದಂತೆ, ಸಿಎಂ ಯೋಗಿ ಆದಿತ್ಯನಾಥ್, ತನಿಖೆಗೆ ಉನ್ನತ ಮಟ್ಟದ ಅಧಿಕಾರಿಗಳ ತಂಡವನ್ನು ನೇಮಿಸಿದ್ದಾರೆ. ಬಾಲಿಕಾ ಗೃಹವನ್ನು ನೋಡಿ ಕೊಳ್ಳುತ್ತಿದ್ದ ಗಿರಿಜಾ ತ್ರಿಪಾಠಿ ಮತ್ತು ಮೋಹನ್ ತ್ರಿಪಾಠಿ ಎಂಬ ದಂಪತಿಯನ್ನು ಬಂಧಿಸಲಾಗಿದೆ.
ತಪ್ಪಿತಸ್ಥರ ಬಿಡಲ್ಲ: ಇದೇ ವೇಳೆ, ಮುಜಾಫರ್ಪುರ ಘಟನೆಗೆ ಸಂಬಂಧಿಸಿ ಸೋಮವಾರ ಪ್ರತಿಕ್ರಿಯಿಸಿರುವ ಬಿಹಾರ ಸಿಎಂ ನಿತೀಶ್ ಕುಮಾರ್, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಪ್ರಕರಣದಲ್ಲಿ ಸಚಿವೆ ಮಂಜು ವರ್ಮಾ ಪಾತ್ರವಿದೆ ಎಂದಾದರೆ ಅವರನ್ನೂ ಮನೆಗೆ ಕಳುಹಿಸಲು ಸಿದ್ಧ ಎಂದಿದ್ದಾರೆ. ಲೋಕಸಭೆಯಲ್ಲೂ ಇದೇ ವಿಚಾರ ಸಂಬಂಧ ವಿಪಕ್ಷಗಳು ಗದ್ದಲವೆಬ್ಬಿಸಿವೆ.