ಪರ್ರಿಕರ್ ಮತ್ತು ಸಾವಂತ್ ರಿಂದ ಗೋವಾಕ್ಕೆ ದ್ರೋಹ: ಚೋಡಂಕರ್ ಆಕ್ರೋಶ
ಮಹದಾಯಿ ವಿಚಾರದಲ್ಲಿ ಕರ್ನಾಟಕದ ನಾಯಕರು ಮಾತೃಭೂಮಿಗೆ ನಿಷ್ಠರಾಗಿದ್ದಾರೆ
Team Udayavani, Jan 9, 2023, 7:33 PM IST
ಪಣಜಿ: ಮಹದಾಯಿ ವಿಚಾರದಲ್ಲಿ ಕರ್ನಾಟಕದ ನಾಯಕರು ಮಾತೃಭೂಮಿಗೆ ನಿಷ್ಠರಾಗಿಯೇ ಇದ್ದಾರೆ. ಗೋವಾ ಮಾಜಿ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಮತ್ತು ಡಾ. ಪ್ರಮೋದ್ ಸಾವಂತ್ ಅವರು ತಮ್ಮ ತಾಯ್ನಾಡಿಗೆ ದ್ರೋಹ ಮಾಡಿದ್ದಾರೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ಗಿರೀಶ್ ಚೋಡಂಕರ್ ಆರೋಪಿಸಿದ್ದಾರೆ.
ಪಣಜಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು-ಕರ್ನಾಟಕದ ನಾಯಕರು ಮಾತೃಭೂಮಿಗೆ ತೋರಿದ ನಿಷ್ಠೆಯಂತೆ ಗೋವಾದ ಬಿಜೆಪಿ ನಾಯಕರು ತಮ್ಮ ಮಾತೃಭೂಮಿಗೆ ನಿಷ್ಠೆಯನ್ನು ತೋರಿಸಬೇಕು. ಗೋವಾದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದೊಂದಿಗೆ ಗೋವಾ ಬಿಜೆಪಿ ನಾಯಕರು ಅಂದು ವಾದಕ್ಕಿಳಿದಿದ್ದರು. ಕಳೆದ ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಸಾವಂತ್ ಅವರು ಮಹದಾಯಿ ನನ್ನ ತಾಯಿ ಎಂದು ಹೇಳಿಕೊಂಡಿದ್ದರೂ, ರಾಜಕೀಯ ಲಾಭಕ್ಕಾಗಿ ತಾಯಿಯೊಂದಿಗೆ ರಾಜಿ ಮಾಡಿಕೊಳ್ಳುತ್ತಿದ್ದಾರೆ ಎಂದು ಗಿರೀಶ್ ಚೋಡಂಕರ್ ಆರೋಪಿಸಿದರು.
ಕಾಂಗ್ರೆಸ್ ನಿಯೋಗವು ಕಳಸಾ-ಬಂಡೂರಿ ಯೋಜನಾ ಸ್ಥಳಕ್ಕೆ ಭೇಟಿ ನೀಡಿದಾಗ, ಮಹದಾಯಿ ನೀರನ್ನು ತಿರುಗಿಸಲಾಗಿದೆ ಎಂದು ಗೋವಾ ಮುಖ್ಯಮಂತ್ರಿ ಸಾವಂತ್ ಗಮನಕ್ಕೆ ತಂದರೂ ಆಗ ಸಾವಂತ್ ಅದನ್ನು ನಿರಾಕರಿಸಿದ್ದರು ಎಂದು ಚೋಡಂಕರ್ ನೆನಪಿಸಿದರು. ಹಾಗಾದರೆ ಯಾರು ಸುಳ್ಳು ಹೇಳುತ್ತಾರೆ, ಅಂತಹ ಸುಳ್ಳುಗಾರರನ್ನು ನಾವು ನಂಬಬೇಕೇ? ಇಂಥವರ ಕೈಯಲ್ಲಿ ನಮ್ಮ ಗೋವಾ ಸುರಕ್ಷಿತವೇ? ಮುಂತಾದ ಪ್ರಶ್ನೆಗಳನ್ನು ಚೋಡಂಕರ್ ಎತ್ತಿದ್ದಾರೆ. ಇಂತಹ ಗಂಭೀರ ವಿಚಾರದಲ್ಲಿ ಸುಳ್ಳು ಹೇಳಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದೂ ಚೋಡಂಕರ್ ಒತ್ತಾಯಿಸಿದ್ದಾರೆ.