ಗೋವಾ ಗ್ರಾ.ಪಂ.ಚುನಾವಣೆ; ಕನ್ನಡ ಅಭ್ಯರ್ಥಿಗಳ ಪ್ಯಾನಲ್ : ವಿವಾದಕ್ಕೆ ಗುರಿ
ನಿಮ್ಮ ತಂದೆಯ ಆಸ್ತಿಯಲ್ಲ ಎಂದ ತುಕಾರಾಂ ಪರಬ್
Team Udayavani, May 15, 2022, 7:21 PM IST
ಸಿದ್ಧಣ್ಣ ಮೇಟಿ, ತುಕಾರಾಂ ಪರಬ್
ಪಣಜಿ: ಜೂನ್ ತಿಂಗಳಲ್ಲಿ ಗೋವಾ ರಾಜ್ಯದ 190 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಯಲಿದೆ. ಅಗತ್ಯಬಿದ್ದರೆ ಕನ್ನಡ ಅಭ್ಯರ್ಥಿಗಳ ಪ್ಯಾನಲ್ ರಚಿಸುವುದಾಗಿ ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯಾಧ್ಯಕ್ಷ ಸಿದ್ಧಣ್ಣ ಮೇಟಿ ಘೋಷಿಸಿದ್ದಾರೆ.
ಸಿದ್ಧಣ್ಣ ಮೇಟಿ ಹೇಳಿಕೆ ಬೆನ್ನಲ್ಲೆ ಪ್ರಾದೇಶಿಕ ರಾಜಕೀಯ ಪಕ್ಷಗಳಲ್ಲಿ ನಡುಕ ಶುರುವಾಗಿದೆ. ಗೋವಾ ಕನ್ನಡಿಗರನ್ನು ಟೀಕಿಸುವ ಭರದಲ್ಲಿ ರೆವೊಲ್ಯೂಷನ್ ಗೋವನ್ ಪಕ್ಷದ ಅಧ್ಯಕ್ಷ ತುಕಾರಾಂ ಪರಬ್ ವಿವಾದಿತ ಹೇಳಿಕೆ ನೀಡಿದ್ದಾರೆ.
ಗೋವಾ ಸ್ಥಳೀಯ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ, ಗೋವಾ ಕನ್ನಡಿಗರು ನಮ್ಮ ಸಾಂಪ್ರದಾಯಿಕ ಹಬ್ಬಗಳಲ್ಲಿ ಏಕೆ ಪ್ರವೇಶಿಸುತ್ತಾರೆ. ಗೋವಾದಲ್ಲಿ ಕನ್ನಡಿಗರು ದುರ್ಗಾ ಪೂಜೆ ಮಾಡುತ್ತಾರೆ. ಗಣೇಶ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ರಾಜಕೀಯ ಲಾಭಕ್ಕಾಗಿ ಗೋವಾ ಕನ್ನಡಿಗರು. ನಮ್ಮ ಹಬ್ಬಗಳಲ್ಲಿ ಭಾಗಿಯಾಗುತ್ತೀರಿ. ಗೋವಾ ಕನ್ನಡಿಗರು ಗೋವಾವನ್ನು ತಮ್ಮ ತಂದೆಯ ಆಸ್ತಿ ಎಂದು ಭಾವಿಸಿದ್ದಾರೆ. ಗೋವಾದಲ್ಲಿ ಕನ್ನಡಿಗರು ದಾದಾಗಿರಿ ಪ್ರದರ್ಶಿಸುತ್ತಾರೆ. ಇದು ನಿಮ್ಮ ತಂದೆಯ ಆಸ್ತಿಯಲ್ಲ, ನಮ್ಮ ತಂದೆಯ ಆಸ್ತಿ, ನೀವು ನಮ್ಮ ಹಬ್ಬಗಳ ಆಚರಣೆಯಲ್ಲಿಯೂ ಮಧ್ಯಪ್ರವೇಶಿಸುತ್ತೀರಿ ಎಂದು ಹೇಳುವ ಮೂಲಕ ಗೋವಾದಲ್ಲಿ ಹಿಂದೂ ಉತ್ಸವ ಮತ್ತು ಸಮಾರಂಭದಲ್ಲಿ ಕನ್ನಡಿಗರು ಭಾಗವಹಿಸುವುದಕ್ಕೂ ರೆವೊಲ್ಯೂಷನ್ ಗೋವನ್ಸ್ ಪಕ್ಷದ ಅಧ್ಯಕ್ಷ ತುಕಾರಾಮ ಪರಬ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.