ರಾಜಸ್ಥಾನ ಸಿಎಂ, ಪುತ್ರನ ವಿರುದ್ಧ ಸಿಬಿಐ ತನಿಖೆ ಕೋರಿದ ಅರ್ಜಿ ವಜಾ
Team Udayavani, Aug 8, 2018, 12:26 PM IST
ಹೊಸದಿಲ್ಲಿ : ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸರಕಾರದ ಜಮೀನನ್ನು ಮಾರುವ ಮೂಲಕ 1.97 ಕೋಟಿ ರೂ. ಪರಿಹಾರ ಪಡೆದಿರುವ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಮತ್ತು ಆಕೆಯ ಪುತ್ರನ ವಿರುದ್ಧ ಎಫ್ಐಆರ್ ದಾಖಲಿಸುವುದಕ್ಕೆ ಮತ್ತು ಸಿಬಿಐ ತನಿಖೆಗೆ ಅನುಮತಿ ನೀಡಬೇಕು ಎಂದು ಕೋರಿದ ಅರ್ಜಿಯನ್ನು ಇಂದು ದಿಲ್ಲಿ ಹೈಕೋರ್ಟ್ ವಜಾ ಮಾಡಿತು.
ಇಲ್ಲಿನ ವಿಶೇಷ ಸಿಬಿಐ ನ್ಯಾಯಾಲಯದ 2015ರ ಎಪ್ರಿಲ್ 18ರ ನಿರ್ಧಾರವನ್ನೂ ಪ್ರಶ್ನಿಸಿದ್ದ ಈ ಅರ್ಜಿಯನ್ನು ಜಸ್ಟಿಸ್ ಆರ್ ಕೆ ಗೌಬಾ ಅವರು ವಜಾ ಮಾಡಿದರು.
ಭ್ರಷ್ಟಾಚಾರ ತಡೆ ಕಾಯಿದೆಯಡಿ ಪೂರ್ವಾನುಮತಿಯನ್ನು ಪಡೆದುಕೊಳ್ಳದ ಕಾರಣಕ್ಕೆ ವಿಚಾರಣಾ ನ್ಯಾಯಾಲಯವು ಪ್ರಕರಣಕ್ಕೆ ಸಂಬಂಧಿಸಿ ಆದೇಶ ಹೊರಡಿಸಲು ನಿರಾಕರಿಸಿತ್ತು.