ಹಿಮದಲ್ಲಿ ಸಿಲುಕಿದ ಕನ್ನಡಿಗ; ಎರಡು ದಿನದ ಕಾರ್ಯಾಚರಣೆಯಲ್ಲೂ ಸಿಗದ ಸುಳಿವು
Team Udayavani, Jun 18, 2022, 7:16 PM IST
ಶಿಮ್ಲಾ: ಹಿಮಾಚಲ ಪ್ರದೇಶದ ಲಾಹೌಲ್ ಮತ್ತು ಸ್ಪಿತಿ ಜಿಲ್ಲೆಯ ಬಟಾಲ್ ಬಳಿಯೆ ಗ್ಲಾಸಿಯರ್ ಸಿಬಿ-13ಗೆ ಟ್ರೆಕ್ಕಿಂಗ್ಗೆಂದು ತೆರಳಿದ್ದ ಬೆಂಗಳೂರಿನ ಯುವಕ ಕಣಿವೆಗೆ ಬಿದ್ದಿದ್ದು, ಯುವಕನ ರಕ್ಷಣೆಗೆ ಸತತ ಪ್ರಯತ್ನಗಳು ನಡೆಯುತ್ತಿವೆ.
ವೇದವ್ಯಾಸ ಹೆಸರಿನ ಯುವಕ ನಾಲ್ವರು ಸ್ನೇಹಿತರೊಂದಿಗೆ ಟ್ರೆಕ್ಕಿಂಗ್ಗೆ ತೆರಳಿದ್ದು, ಗುರುವಾರ ಬೆಳಗ್ಗೆ 11 ಗಂಟೆಗೆ ಹೊತ್ತಿಗೆ ಕಣಿವಿಗೆ ಬಿದ್ದಿದ್ದಾನೆ.
ಆತನೊಂದಿಗಿದ್ದ ಸ್ನೇಹಿತರು ಪರ್ವತದಿಂದ ಕೆಳಗಿಳಿದು, ಅಲ್ಲಿದ್ದ ವಿಜ್ಞಾನಿಗಳ ಸೆಟೆಲೈಟ್ ಫೋನ್ ಬಳಸಿಕೊಂಡು ಈ ವಿಚಾರವನ್ನು ಜಿಲ್ಲಾಡಳಿತಕ್ಕೆ ತಲುಪಿಸಿದ್ದಾರೆ. ವೇದವ್ಯಾಸ ಬಿದ್ದಿರುವ ಸ್ಥಳಕ್ಕೆ ತಲುಪಲು ಸುಮಾರು 2 ದಿನಗಳ ಕಾಲಾವಕಾಶ ಬೇಕಾದರೂ ಜಿಲ್ಲಾಡಳಿತ ಮತ್ತು ಸೇನೆಯ ಸಿಬ್ಬಂದಿ ಶುಕ್ರವಾರ ಸಂಜೆ 5 ಗಂಟೆ ಹೊತ್ತಿಗೆ ಸ್ಥಳಕ್ಕೆ ತಲುಪಿ ವೇದವ್ಯಾಸನಿಗಾಗಿ ಕುಡುಕಾಟ ನಡೆಸಿದ್ದಾರೆ. ಶನಿವಾರ ಸಂಜೆಯವರೆಗೂ ಆತನ ಸುಳಿವು ಸಿಕ್ಕಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.
ಆ ತಂಡವು ಭಾರತದ ಪರ್ವತಾರೋಹಣ ಒಕ್ಕೂಟದಿಂದ ಟ್ರೆಕ್ಕಿಂಗ್ಗೆ ಅನುಮತಿ ಪಡೆದಿತ್ತಾದರೂ, ಟ್ರೆಕ್ಕಿಂಗ್ ಆರಂಭಿಸುವುದಕ್ಕೂ ಮೊದಲು ಸ್ಥಳೀಯ ಆಡಳಿತಕ್ಕೆ ಮಾಹಿತಿ ಕೊಟ್ಟಿಲ್ಲ ಎಂದು ಜಿಲ್ಲೆಯ ಉಪ ಆಯುಕ್ತರಾಗಿರುವ ನೀರಜ್ ಕುಮಾರ್ ತಿಳಿಸಿದ್ದಾರೆ.