ಮೇ 21 ರಿಂದ 2 ದಿನಗಳ ಗೃಹ ಸಚಿವ ಅಮಿತ್ ಶಾ ಅರುಣಾಚಲ ಪ್ರವಾಸ
Team Udayavani, May 20, 2022, 7:35 PM IST
ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಮತ್ತು ಭಾನುವಾರದಂದು ಅರುಣಾಚಲ ಪ್ರದೇಶ ಪ್ರವಾಸದಲ್ಲಿರಲಿದ್ದಾರೆ. ಈ 2 ದಿನಗಳಲ್ಲಿ ಅವರು ಅನೇಕ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ಇಂಡೋ-ಟಿಬೆಟ್ ಗಡಿ ಪೊಲೀಸ್(ಐಟಿಬಿ) ಮತ್ತು ಸಶಸ್ತ್ರ ಸೀಮಾ ಬಲ(ಎಸ್ಎಸ್ಬಿ) ಜತೆ ಸಂವಾದ ನಡೆಸಲಿರುವ ಶಾ, ಲೋಹಿತ್ ಜಿಲ್ಲೆಯ ವಾಕ್ರೋದಲ್ಲಿ 51 ಅಡಿ ಎತ್ತರದ ಪರಶುರಾಮ ಪ್ರತಿಮೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆಸಲಿದ್ದಾರೆ.
ತಿರಪ್ ಜಿಲ್ಲೆಯಲ್ಲಿ ಸ್ವರ್ಣ ಜಯಂತಿ ಸಮಾರೋಪದಲ್ಲಿ ಭಾಗವಹಿಸಲಿದ್ದಾರೆ. ನಮ್ಸಾಯಿ ನಗರದಲ್ಲಿ ಗೋಲ್ಡನ್ ಪಗೋಡಾ ಮಂದಿರಕ್ಕೆ ಭೇಟಿ ನೀಡಲಿರುವ ಅವರು, ನಗರದಲ್ಲಿ ಹಲವು ಯೋಜನೆಗಳಿಗೆ ಚಾಲನೆ ನೀಡಲಿದ್ದು, ಸಾರ್ವಜನಿಕ ಸಭೆಯಲ್ಲೂ ಪಾಲ್ಗೊಳ್ಳಲಿದ್ದಾರೆ.
ಸೇನೆಯ ಎಲ್ಲ ಹಂತದ ಅಧಿಕಾರಿಗಳು ಮತ್ತು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯ ಅಧಿಕಾರಿಗಳೊಂದಿಗೆ ಔತಣ ಕೂಟ(ಬಡಾ ಖಾನ್)ದಲ್ಲಿ ಭಾಗಿಯಾಗಲಿದ್ದಾರೆ.