ರಾಕೆಟ್ ದಾಳಿಯಲ್ಲಿ ಮಡಿದ ಕೇರಳದ ಸೌಮ್ಯ ಕುಟುಂಬದ ಜವಾಬ್ದಾರಿ ಹೊತ್ತ ಇಸ್ರೇಲ್ ಸರ್ಕಾರ
Team Udayavani, May 13, 2021, 10:09 PM IST
ಕೇರಳ: ಗಾಜಾದಲ್ಲಿ ಪ್ಯಾಲೆಸ್ಟೈನ್ ಮೂಲದ ಭಯೋತ್ಪಾದಕ ಸಂಘಟನೆಯು ನಡೆಸಿದ ರಾಕೆಟ್ ದಾಳಿಯಲ್ಲಿ ಇಸ್ರೇಲ್ನಲ್ಲಿ ಮಡಿದ ಕೇರಳದ ಸೌಮ್ಯ ಸಂತೋಷ್ ಕುಟುಂಬದ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳುವುದಾಗಿ ಇಸ್ರೇಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಕೇರಳದ ಇಡುಕ್ಕಿ ಜಿಲ್ಲೆಯ ಸೌಮ್ಯ ಸಂತೋಷ್, ದಕ್ಷಿಣ ಇಸ್ರೇಲ್ನ ಕರಾವಳಿ ನಗರವಾದ ಅಶ್ಕೆಲೋನ್ನ ಮನೆಯೊಂದರಲ್ಲಿ ವೃದ್ಧೆರೊಬ್ಬರಿಗೆ ಆರೈಕೆ ಮಾಡುವ ಕೆಲಸ ಮಾಡುತ್ತಿದ್ದರು. ಉಗ್ರರು ಉಡಾಯಿಸಿದ ರಾಕೆಟ್ ವೃದ್ಧೆಯ ಮನೆಗೆ ಅಪ್ಪಳಿಸಿತ್ತು.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸೌಮ್ಯ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದರು.ಮಂಗಳವಾರ ಮಧ್ಯಾಹ್ನ ಘಟನೆ ಸಂಭವಿಸಿದಾಗ ಸೌಮ್ಯ ಅವರು ಪತಿ ಸಂತೋಷ್ ಅವರೊಂದಿಗೆ ವಿಡಿಯೊ ಕರೆ ಮೂಲಕ ಮಾತನಾಡುತ್ತಿದ್ದರು.‘ಇಲ್ಲಿ ಯುದ್ಧದ ವಾತಾವರಣವಿದೆ’ ಎಂದು ಅತ್ತಕಡೆಯಿಂದ ಸೌಮ್ಯ ಅವರು ಹೇಳುತ್ತಿದ್ದಂತೆ ಜೋರಾದ ಶಬ್ದ ಕೇಳಿಸಿತು. ಆದರೆ, ಫೋನ್ ಸಂಪರ್ಕ ಕಡಿತಗೊಂಡಿರಲಿಲ್ಲ. ಈ ಕಡೆಯಿಂದ ಸಂತೋಷ್ ಅವರು ‘ಹಲೋ ಹಲೋ’ ಎಂದು ಅನೇಕ ಬಾರಿ ಹೇಳಿದರೂ ಅತ್ತಲಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಗಾಬರಿಗೊಂಡ ಸಂತೋಷ್ ಇಸ್ರೇಲ್ನಲ್ಲಿರುವ ತಮ್ಮ ಸ್ನೇಹಿತರಿಗೆ ಕರೆ ಮಾಡಿ ವಿಚಾರಿಸಿದಾಗ, ರಾಕೆಟ್ ದಾಳಿಯಲ್ಲಿ ಸೌಮ್ಯ ಸಾವಿಗೀಡಾದ ಸುದ್ದಿ ತಿಳಿಯಿತು.
ಸೌಮ್ಯ ಸಂತೋಷ್ ಅವರ ಸಾವಿಗೆ ಸಂತಾಪ ಸೂಚಿಸಿರುವ ಇಸ್ರೇಲಿನ ಸರ್ಕಾರ, ಆಕೆಯ ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದಿದೆ. ಆಕೆಯ ಪಾರ್ಥಿವ ಶರೀರವನ್ನು ಭಾರತಕ್ಕೆ ಕಳುಹಿಸಿ ಕೊಡಲಾಗುತ್ತಿದೆ ಎಂದು ತಿಳಿಸಿದೆ.