ವಿಶ್ವದ ಕಾಶ್ಮೀರಿಗಳ ಒಗ್ಗೂಡಿಸಲು ರೇಡಿಯೊ ಶಾರದಾ
Team Udayavani, Feb 17, 2023, 6:45 AM IST
ಜಮ್ಮು: ಸದ್ಯ ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ 1990ರ ದಶಕದಲ್ಲಿ ಭಯೋತ್ಪಾದನೆ ತೀವ್ರಗೊಂಡಿದ್ದರಿಂದ ಕಾಶ್ಮೀರಿಗಳು ಹಾಗೂ ಕಾಶ್ಮೀರಿ ಪಂಡಿತ ಸಮುದಾಯದವರು ರಾತ್ರೋರಾತ್ರಿ ಕಣಿವೆ ತೊರೆದಿದ್ದರು. ಅವರನ್ನೆಲ್ಲ ಒಗ್ಗೂಡಿಸುವುದು ಹೇಗೆ? ಅವರನ್ನು ಒಗ್ಗೂಡಿಸುವುದು ಹೇಗೆ? ಇಂಥ ಕೆಲಸವನ್ನು 2011ರಿಂದ ಒಂದು ರೇಡಿಯೊ ವಾಹಿನಿ ಮಾಡುತ್ತಿದೆ. ಕಾಶ್ಮೀರಿ ಪಂಡಿತರಿಗೆಂದೇ ಸಿದ್ಧಪಡಿಸಲಾಗಿರುವ “ರೇಡಿಯೊ ಶಾರದಾ’ (90.4 ಎಫ್ಎಂ) ಜಮ್ಮುವಿನಲ್ಲಿದೆ. ಇದನ್ನು ಸ್ಥಾಪಿಸಿದ್ದು ರಮೇಶ್ ಹಾಂಗ್ಲೂ.
ಈ ವಾಹಿನಿಯ ಘೋಷವಾಕ್ಯ “ಬೂಝಿವ್ ತೇ ಖೋಶ್ ರೂಝಿವ್’ (ಕೇಳಿ, ಆನಂದವಾಗಿರಿ). ಕಾಶ್ಮೀರ ಪಂಡಿತರು ಕಣಿವೆಯನ್ನು ತೊರೆದು ಭಾರತ ಮತ್ತು ವಿಶ್ವಾದ್ಯಂತ 108 ದೇಶಗಳಲ್ಲಿ ಹಂಚಿ ಹೋಗಿದ್ದಾರೆ. ಅವರನ್ನೆಲ್ಲ ಈ ವಾಹಿನಿಯ ಮೂಲಕ ಒಗ್ಗೂಡಿಸಲಾಗುತ್ತಿದೆ. ಇದರ ಮೂಲಕ ಕಾಶ್ಮೀರಿ ಸಂಸ್ಕೃತಿ, ಇತಿಹಾಸ, ಸಂಗೀತ, ಭಜನೆಗಳು, ಸಮುದಾಯವನ್ನು ಬಾಧಿಸುತ್ತಿರುವ ಸಮಸ್ಯೆಗಳನ್ನು ಪ್ರಸಾರ ಮಾಡಲಾಗುತ್ತದೆ.
82 ವರ್ಷದ ಅವತಾರ್ ಕ್ರಿಶೆನ್ ಭಟ್ ಎಂಬ ವ್ಯಕ್ತಿ ಈ ವಾಹಿನಿಯನ್ನು ಕೇಳಿಸಿಕೊಳ್ಳಲಿಕ್ಕಾಗಿಯೇ ಒಂದು ರೇಡಿಯೊ ಕೊಂಡಿದ್ದಾರೆ. ಇನ್ನು 19 ವರ್ಷದ, ಈಗಿನ ತಲೆಮಾರಿನ ಯುವಕ ಶಿವಾಂಶ ರೈನಾ ಮೊಬೈಲ್ನಲ್ಲಿ ಇದನ್ನು ಕೇಳಿಸಿಕೊಳ್ಳುತ್ತಾರೆ. 2014ರಲ್ಲಿ ಕಾಶ್ಮೀರದಲ್ಲಿ ಪ್ರವಾಹ ಸಂಭವಿಸಿದಾಗ, 2019ರಲ್ಲಿ 370ನೇ ವಿಧಿಯನ್ನು ಹಿಂಪಡೆದ ಬಗ್ಗೆ ಜನರು ಈ ವಾಹಿನಿಯ ಮೂಲಕವೇ ಮಾಹಿತಿ ಪಡೆದುಕೊಂಡಿದ್ದರು.
ಈ ವಾಹಿನಿಗೆ 2018, 2019ರಲ್ಲಿ ಅತ್ಯುತ್ತಮ ಸಾಮುದಾಯಿಕ ರೇಡಿಯೊ ವಾಹಿನಿ ಎಂಬ ರಾಷ್ಟ್ರೀಯ ಪ್ರಶಸ್ತಿ ಲಭಿಸಿತ್ತು. ಕಾಶ್ಮೀರದಲ್ಲಿ ಫೆ.17,18ರಂದು ಮಹಾ ಶಿವರಾತ್ರಿ ಆಚರಣೆ ಸಂಭ್ರಮದಲ್ಲಿ ನಡೆಯುತ್ತಿದೆ.