ಐತಿಹಾಸಿಕ ಪ್ರಕರಣಗಳಲ್ಲಿ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ಜಡ್ಜ್ ಅಬ್ದುಲ್ ನಜೀರ್ ನಿವೃತ್ತಿ
Team Udayavani, Jan 5, 2023, 7:00 AM IST
ಹೊಸದಿಲ್ಲಿ: ಅಯೋಧ್ಯೆ ವಿವಾದ, ತ್ರಿವಳಿ ತಲಾಖ್, ನೋಟು ಅಮಾನ್ಯ ಸೇರಿದಂತೆ ಪ್ರಮುಖ ಐತಿಹಾಸಿಕ ಪ್ರಕರಣಗಳಲ್ಲಿ ತೀರ್ಪು ನೀಡಿದ ಸುಪ್ರೀಂ ಕೋರ್ಟ್ನ ಹಿರಿಯ ನ್ಯಾಯಮೂರ್ತಿ, ಮೂಡುಬಿದಿರೆ ಮೂಲದ ಸಯ್ಯದ್ ಅಬ್ದುಲ್ ನಜೀರ್ ಅವರು ಬುಧವಾರ ನಿವೃತ್ತರಾಗಿದ್ದಾರೆ.
ಸಂಸ್ಕೃತ ಶ್ಲೋಕದಿಂದ ಮಾತು ಮುಕ್ತಾಯ :
ನ್ಯಾ| ನಜೀರ್ ಮಾತನಾಡಿ, “6 ವರ್ಷ ಕಾಲ ಸುಪ್ರೀಂ ಕೋರ್ಟ್ ನಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು’. “ಧರ್ಮೇ ಸರ್ವಂ ಪ್ರತಿಷ್ಠಿತಂ ತಸ್ಮತ್ ಧರ್ಮಂ ಪರಮಂ ವದಂತಿ’ ಅಂದರೆ “ಜಗತ್ತಿನಲ್ಲಿ ಪ್ರತಿ ಯೊಂದು ಅಂಶವೂ ಧರ್ಮದಿಂದ ಕೂಡಿದೆ. ಹೀಗಾಗಿ, ಅದುವೇ ಪರಮೋ ನ್ನತ ವಾದದ್ದು’ ಎಂದರು. ಉದಯವಾಣಿ ಜತೆ ಮಾತನಾಡಿ, “ವೃತ್ತಿಜೀವನ ನನಗೆ ಬಹಳ ಸಂತೃಪ್ತಿ ನೀಡಿದೆ. ಇದು ಮರೆಯಲಾರದ ಅನುಭವ’ ಎಂದರು. ಬೆಂಗಳೂರಿನಲ್ಲಿ ನಿವೃತ್ತಿ ಜೀವನ ನಡೆಸಲಿದ್ದಾರೆ.
ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ವತಿ ಯಿಂದ ಮುಖ್ಯ ನ್ಯಾ. ಡಿ.ವೈ.ಚಂದ್ರಚೂಡ್ ಉಪಸ್ಥಿತಿಯಲ್ಲಿ ನ್ಯಾ. ಅಬ್ದುಲ್ ನಝೀರ್ ಅವರನ್ನು ಅಭಿನಂದಿ ಸಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ನ್ಯಾಯಮೂರ್ತಿ “ನ್ಯಾ| ಅಬ್ದುಲ್ ನಝೀರ್ ತಮಗೆ ಅನಿಸಿದ್ದು ಸರಿ ಎಂದು ಪ್ರಬಲವಾಗಿ ಪ್ರತಿಪಾದಿಸುತ್ತಿದ್ದರು. ಅದರಂತೆಯೇ ಇದ್ದರು. ‘ ಎಂದರು.
ಪ್ರಮುಖ ತೀರ್ಪುಗಳು: 2018 ರಲ್ಲಿ ಆಧಾರ್ ಮಾನ್ಯತೆ, ಎಸ್ಟಿ, ಎಸ್ಸಿ ಸಮುದಾಯಕ್ಕೆ ಸೇರಿದ ವ್ಯಕ್ತಿ ಮತ್ತೂಂದು ರಾಜ್ಯ ದಲ್ಲಿ ಮೀಸಲು ಲಾಭ ಪಡೆ ಯ ಬಾ ರದು ಎಂಬ ಪ್ರಕರ ಣದಲ್ಲೂ ತೀರ್ಪು ನೀಡಿದ್ದರು.
ಮೂಡಬಿದಿರೆಯಲ್ಲಿ ಜನನ: 1958ರ ಜ.5ರಂದು ಕರ್ನಾಟಕದ ಮೂಡಬಿದಿರೆ ಯಲ್ಲಿ ಜನಿಸಿದ ಅವರು, 1983ರ ಫೆ.1 8 ರಂದು ನ್ಯಾಯವಾದಿಯಾಗಿ ನೋಂದಣಿ ಮಾಡಿಸಿಕೊಂಡರು. 2003 ಮೇ 12ರಂದು ಕರ್ನಾಟಕ ಹೈಕೋರ್ಟ್ನ ಹೆಚ್ಚುವರಿ ಜಡ್ಜ್ ಆಗಿ ನೇಮಕ ಗೊಂಡರು. 2004ರ ಸೆಪ್ಟಂಬರ್ನಲ್ಲಿ ಹೈಕೋರ್ಟ್ನ ಪೂರ್ಣ ಪ್ರಮಾಣದ ನ್ಯಾಯ ಮೂರ್ತಿಯಾಗಿ ನೇಮಕಗೊಂಡರು. 2017ರ ಫೆ.17ರಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿಗೊಂಡರು.
ವೃತ್ತಿಯಲ್ಲಿ ಸಂತೃಪ್ತಿ: ನ್ಯಾ| ನಝೀರ್: ನ್ಯಾಯಾಂಗ ಸೇವೆಯಲ್ಲಿ ನನಗೆ ಪೂರ್ಣ ಸಂತೃಪ್ತಿ ಇದೆ. ಎಲ್ಲವೂ ನನಗೆ ಸುಗಮವಾಗಿ ಒದಗಿಬಂದಿದೆ ಎಂದು ಬುಧವಾರ ನಿವೃತ್ತಿ ಹೊಂದಿರುವ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಅಬ್ದುಲ್ ನಝಿರ್ ಉದಯವಾಣಿಗೆ ಪ್ರತಿಕ್ರಿಯಿಸಿದ್ದಾರೆ.
ನ್ಯಾ| ನಝಿರ್ ಅವರು ಮೂಡುಬಿದಿರೆ ಸಮೀಪದ ಬೆಳುವಾಯಿಯ ಕಾನದವರು. ತಂದೆ ಫಕೀರ್ ಸಾಹೇಬ್ ತಾಯಿ ಹಮೀದಾಬಿ. ಕಾಲೇಜು ದಿನಗಳಲ್ಲಿ ಭಾಷಣ, ಕ್ವಿಝ್, ನಾಟಕ ಅದರಲ್ಲೂ ತುಳು, ಹಿಂದೀ ನಾಟಕಗಳಲ್ಲಿ ಅಭಿನಯಿಸಿದ್ದುಂಟು. 50ರ ಸಂಭ್ರಮದಲ್ಲಿರುವ ಮೂಡುಬಿದಿರೆ ಅಲಂಗಾರು ಕಟ್ಟೆಯ ಸತ್ಯನಾರಾಯಣ ಪೂಜೆಯ ಸಾಂಸ್ಕೃತಿಕ ಕಲಾಪಗಳಲ್ಲಿ ತುಳು ನಾಟಕಗಳಲ್ಲಿ ಹಲವಾರು ರಂಗವೇರಿದ್ದರು. ಮೂಡುಬಿದಿರೆ ಮಾತ್ರವಲ್ಲ ದ.ಕ. ಉಡುಪಿ ಜಿಲ್ಲೆಗಳ ನ್ಯಾಯಾಲಯಗಳು, ವಕೀಲರ ಸಂಘಗಳ ಸ್ಥಾಪನೆ, ಸೌಧಗಳ ನಿರ್ಮಾಣದಲ್ಲಿ ಪಾತ್ರ ಮಹತ್ವದ್ದು.
ಬೆಂಗಳೂರಲ್ಲಿ ನಿವೃತ್ತ ಜೀವನ ಕಳೆಯುವೆ. ಬರೆಯುವ ಮತ್ತು ಇತರ ಚಟುವಟಿಕೆಗಳ ಬಗ್ಗೆ ಸದ್ಯ ಯಾವುದೇ ಪ್ಲಾನಿಂಗ್ ಇಲ್ಲ. ಕನಿಷ್ಠ ಒಂದು ತಿಂಗಳು ಆರಾಮವಾಗಿರಲು ಬಯಸಿರುವೆ.– ನಿವೃತ್ತ ನ್ಯಾ|ಮೂ| ಅಬ್ದುಲ್ ನಝೀರ್