PM Modi ಭೇಟಿಯ ವಿರುದ್ಧ ಬೆದರಿಕೆ ಪತ್ರ; ಕೇರಳದಲ್ಲಿ ಹೈ ಅಲರ್ಟ್
ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದೆ...
Team Udayavani, Apr 22, 2023, 3:20 PM IST
ತಿರುವನಂತಪುರಂ : ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೂ ಮುನ್ನ ಕೇರಳ ಬಿಜೆಪಿ ರಾಜ್ಯ ಕಚೇರಿಯಲ್ಲಿ ಬೆದರಿಕೆ ಪತ್ರ ಬಂದ ಹಿನ್ನೆಲೆಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಎ 24 ರಂದು ಕೊಚ್ಚಿಗೆ ಪ್ರಧಾನಿ ಮೋದಿಯವರ ಯೋಜಿತ ಭೇಟಿಯ ಸಂದರ್ಭದಲ್ಲಿ ಆತ್ಮಾಹುತಿ ದಾಳಿಯ ಬೆದರಿಕೆಯನ್ನು ಪತ್ರದಲ್ಲಿ ಹಾಕಲಾಗಿದೆ. ಬೆದರಿಕೆ ಪತ್ರ ಕಳುಹಿಸಿದ ವ್ಯಕ್ತಿಯ ಹೆಸರು ಮತ್ತು ಇತರ ಮಾಹಿತಿಯನ್ನು ಪತ್ರ ಒಳಗೊಂಡಿರುವುದು ಪೊಲೀಸರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿ ತತ್ ಕ್ಷಣ ತನಿಖೆ ಆರಂಭಿಸಿದ್ದಾರೆ.
ಬೆದರಿಕೆ ಪತ್ರದಲ್ಲಿ ಹೆಸರಿರುವ ವ್ಯಕ್ತಿಯನ್ನು ಪೊಲೀಸರು ಗುರುತಿಸಿದ್ದು, ಆದರೆ ಅವರು ಪತ್ರ ಬರೆದಿರುವುದನ್ನು ನಿರಾಕರಿಸಿದ್ದು, ಅವರ ವಿರೋಧಿಗಳು ತನ್ನ ಹೆಸರನ್ನು ಹಾಳು ಮಾಡುವ ದುರುದ್ದೇಶದಿಂದ ಪತ್ರ ಬರೆದಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಇದರ ಹೊರತಾಗಿಯೂ, ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದೆ ಮತ್ತು ಕೇಂದ್ರ ತನಿಖಾ ಸಂಸ್ಥೆಗಳು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿವೆ.
ವಿಶೇಷ ರಕ್ಷಣಾ ಗುಂಪು (SPG) ವಿಶ್ವದ ಅತ್ಯಂತ ಪರಿಣಾಮಕಾರಿ ಭದ್ರತಾ ಸಂಸ್ಥೆಯಾಗಿದೆ. ಪ್ರಧಾನಿಯವರ ಕೇರಳ ಭೇಟಿ ಅತ್ಯಂತ ಸುಸೂತ್ರವಾಗಿ ನಡೆಯಲಿದೆ. ಎಸ್ಪಿಜಿ ಪ್ರಧಾನಿಯ ಜೀವವನ್ನು ರಕ್ಷಿಸುತ್ತದೆ.ಯಾರೂ ಪ್ರಧಾನಿ ಮೋದಿ ಅವರನ್ನು ತಡೆಯಲು ಸಾಧ್ಯವಿಲ್ಲ. ಕಾರ್ಯಕ್ರಮ ಯಶಸ್ವಿಯಾಗಲಿದೆ ಎಂದು ಬಿಜೆಪಿ ಕೇರಳ ಅಧ್ಯಕ್ಷ ಕೆ.ಸುರೇಂದ್ರನ್ ಹೇಳಿಕೆ ನೀಡಿದ್ದಾರೆ.