ಜುವಾರಿ ಜಾಗದಲ್ಲಿ ರಿಯಲ್ ಎಸ್ಟೇಟ್ಗಾಗಿ ಸರ್ಕಾರದಿಂದ ಹಕ್ಕುಪತ್ರ: ವಿಜಯ್ ಸರ್ದೇಸಾಯಿ ಆರೋಪ
Team Udayavani, Jun 8, 2022, 5:08 PM IST
ಪಣಜಿ: ಜುವಾರಿ ಕಂಪನಿಯ ಬಿರ್ಲಾ ಕಂಪನಿಯನ್ನು ಮಾರಾಟ ಮಾಡಿದ್ದರೂ ಇದರ ಹಿಂದೆ ಭಾರಿ ಅವ್ಯವಹಾರವೇ ಇದೆ ಎಂದು ಗೋವಾ ಫಾರ್ವರ್ಡ್ ಪಕ್ಷದ ಅಧ್ಯಕ್ಷ ಹಾಗೂ ಶಾಸಕ ವಿಜಯ್ ಸರ್ದೇಸಾಯಿ ಆರೋಪಿಸಿದ್ದಾರೆ. ಈ ಜಾಗದಲ್ಲಿ ರಿಯಲ್ಎಸ್ಟೇಟ್ಗಾಗಿ ಸರ್ಕಾರ ಹಕ್ಕುಪತ್ರ ನೀಡುವ ಪ್ರಕ್ರಿಯೆ ಆರಂಭಿಸಿದೆ ಎಂದು ಅವರು ಆರೋಪಿಸಿದ್ದಾರೆ.
ಸುದ್ಧಿಗಾರರೊಂದಿಗೆ ಮಾತನಾಡಿ, ಗೋವಾದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಮತ್ತು ಗೋಮಂತಕೀಯರಿಗೆ ಉದ್ಯೋಗ ನೀಡಲು ಗೋವಾ ಸರ್ಕಾರವು ಜುವಾರಿ ಕಂಪನಿಗೆ 500 ಹೆಕ್ಟೇರ್ ಭೂಮಿಯನ್ನು ನೀಡಿತ್ತು. ಜುವಾರಿ ಕಂಪನಿ ಮಾರಾಟದ ಸಂಚು ಕಳೆದ ಹಲವು ತಿಂಗಳ ಹಿಂದೆ ನಡೆಯುತ್ತಿತ್ತು. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ನೀತಿಸಂಹಿತೆ ಜಾರಿಯಲ್ಲಿರುವಾಗಲೇ ಕಂಪನಿಯ ಕಡತಗಳನ್ನು ಸರ್ಕಾರಿ ಖಾತೆಗಳಲ್ಲಿ ಬಿಡುಗಡೆ ಮಾಡುವಂತೆ ಒತ್ತಡ ಹೇರಲಾಗುತ್ತಿತ್ತು ಎಂದು ಆರೋಪಿಸಿದರು.
ಈ ಕಂಪನಿಯು ಭೂಮಿಯನ್ನು ಮಾರಾಟ ಮಾಡಲು ಹಿಡನ್ ಅಜೇಂಡಾ ಹೊಂದಿದೆ. ಸುಮಾರು 500 ಹೆಕ್ಟೇರ್ ಕೋಮುನಿದಾದ್ ಭೂಮಿಯನ್ನು ಅಂದಿನ ಮುಖ್ಯಮಂತ್ರಿ ಬಾಂದೋಡ್ಕರ್ ರವರು 169 ರಲ್ಲಿ ಉದ್ಯಮ ಆರಂಭಿಸಲು ಗುತ್ತಿಗೆಗೆ ನೀಡಿದ್ದರು. ಇದರಿಂದಾಗಿ ಈ ಕಂಪನಿ ಮಾರಾಟದಿಂದ ಸರ್ಕಾರಕ್ಕೆ ಎಷ್ಟು ಆದಾಯ ಬಂದಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಜುವಾರಿ ಕಂಪನಿಯನ್ನು ಮಾರಾಟ ಮಾಡಿದರೆ ಮತ್ತೆ ಈ ಭೂಮಿಯನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳಬೇಕು ಎಂದು ಈ ಹಿಂದೆ ಕೈಗಾರಿಕಾ ಸಚಿವರಾಗಿದ್ದ ವಿಶ್ವಜಿತ್ ರಾಣೆ ಹೇಳಿದ್ದರು. ಆದ್ಧರಿಂದ ಇದೀಗ ಜುವಾರಿ ಕಂಪನಿಯಿಂದ ಈ ಕೋಮುನಿದಾದ್ ಭೂಮಿಯನ್ನು ಸರ್ಕಾರಕ್ಕೆ ಪಡೆದುಕೊಳ್ಳುವರೇ..? ಎಂಬ ವಿವರಣೆ ನೀಡಬೇಕು ಎಂದು ಆಗ್ರಹಿಸಿದರು.