ಮುದ್ರಾ ಯೋಜನೆಯಡಿ 20 ಲಕ್ಷ ಕೋಟಿ ರೂ. ಸಾಲ ನೀಡಲಾಗಿದೆ: ಪ್ರಧಾನಿ ಮೋದಿ
ಕೇಂದ್ರವು 10 ಲಕ್ಷ ಉದ್ಯೋಗಗಳನ್ನು ಒದಗಿಸುವ ಕಾರ್ಯಕ್ರಮವನ್ನು ಪ್ರಾರಂಭಿಸಿದೆ
Team Udayavani, Nov 3, 2022, 6:24 PM IST
ನವದೆಹಲಿ: ಯುವಕರಿಗೆ ಸ್ವಯಂ ಉದ್ಯೋಗಾವಕಾಶಗಳನ್ನು ಕಲ್ಪಿಸಲು ಕೇಂದ್ರದ ಮುದ್ರಾ ಯೋಜನೆಯಡಿ ಇದುವರೆಗೆ 20 ಲಕ್ಷ ಕೋಟಿ ರೂಪಾಯಿಗಳ ಸಾಲವನ್ನು ವಿತರಿಸಲಾಗಿದೆ. ಮಹಾರಾಷ್ಟ್ರವು ಅದರ ಪ್ರಮುಖ ಫಲಾನುಭವಿಗಳಲ್ಲಿ ಒಂದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.
75,000 ಜನರಿಗೆ ಉದ್ಯೋಗ ನೀಡುವ ಮಹಾರಾಷ್ಟ್ರ ಸರಕಾರದ ಗುರಿಯ ಭಾಗವಾಗಿ ನೇಮಕಾತಿ ಪತ್ರಗಳನ್ನು ವಿತರಿಸಲು ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಸಾರವಾದ ವಿಡಿಯೋ ಸಂದೇಶದಲ್ಲಿ ಪ್ರಧಾನಿ ಮೋದಿ, ತಮ್ಮ ಸರಕಾರವು ಸ್ಟಾರ್ಟ್ಅಪ್ಗಳು ಮತ್ತು ಸೂಕ್ಷ್ಮ ಕೈಗಾರಿಕೆಗಳಿಗೆ ನೆರವು ನೀಡುತ್ತಿದೆ ಎಂದರು.
ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವಲ್ಲಿ ಯುವಕರು ಪ್ರಮುಖ ಪಾತ್ರ ವಹಿಸುತ್ತಾರೆ. ಕೇಂದ್ರವು 10 ಲಕ್ಷ ಉದ್ಯೋಗಗಳನ್ನು ಒದಗಿಸುವ ಕಾರ್ಯಕ್ರಮವನ್ನು ಪ್ರಾರಂಭಿಸಿದೆ ಮತ್ತು ಅದೇ ಸಾಲಿನಲ್ಲಿ ಮಹಾರಾಷ್ಟ್ರ ಸರ್ಕಾರವು 75,000 ಜನರಿಗೆ ಉದ್ಯೋಗ ನೀಡುವ ಯೋಜನೆಯನ್ನು ಪ್ರಾರಂಭಿಸಿದೆ. ಗೃಹ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳಲ್ಲಿ ಗರಿಷ್ಠ ನೇಮಕಾತಿ ನಡೆಯಲಿದೆ ಎಂಬುದು ಹೆಮ್ಮೆಯ ವಿಷಯವಾಗಿದೆ ಎಂದು ಮೋದಿ ಹೇಳಿದರು.
ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) ಯೋಜನೆಯ ಮೂಲಕ ಮೋದಿ ಸರಕಾರವು ಏಪ್ರಿಲ್ 2015 ರಲ್ಲಿ ಕಾರ್ಪೊರೇಟ್ ಅಲ್ಲದ, ಕೃಷಿಯೇತರ ಸಣ್ಣ/ಸೂಕ್ಷ್ಮ ಉದ್ಯಮಗಳಿಗೆ ರೂ 10 ಲಕ್ಷದವರೆಗೆ ಸಾಲ ನೀಡಲು ಪ್ರಾರಂಭಿಸಿತು.