ಮಹಾರಾಷ್ಟ್ರ ಬಂದ್: 16 ಎಫ್ಐಆರ್, 300 ಜನ ಪೊಲೀಸ್ ವಶಕ್ಕೆ
Team Udayavani, Jan 4, 2018, 12:31 PM IST
ಮುಂಬಯಿ : ಭೀಮಾ – ಕೋರೇಗಾಂವ್ ಜಾತಿ ಕಾಳಗದ ವಿರುದ್ಧ ನಿನ್ನೆ ಬುಧವಾರ ದಿನ ಪೂರ್ತಿ ನಡೆದಿದ್ದ ಬಂದ್ ವೇಳೆ ಮುಂಬಯಿ ಪೊಲೀಸರು 16 ಎಫ್ಐಆರ್ಗಳನ್ನು ದಾಖಲಿಸಿಕೊಂಡಿದ್ದಾರೆ. ಅಂತೆಯೇ ದಲಿತ ಸಮೂಹಗಳ ಪ್ರತಿಭಟನೆ ಸಂಬಂಧಿತವಾಗಿ 300ಕ್ಕೂ ಅಧಿಕ ಜನರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ನಿನ್ನೆಯ ಬಂದ್ ವೇಳೆ ಮಹಾರಾಷ್ಟ್ರ ರಾಜ್ಯ ಸಾರಿಗೆಯ 200ಕ್ಕೂ ಹೆಚ್ಚು ಬಸ್ಸುಗಳ ಮೇಲೆ ನಡೆದ ದಾಳಿಯಿಂದಾಗಿ ಅವುಗಳಿಗೆ ತೀವ್ರ ಹಾನಿಯಾಗಿದೆ. ಕೊಲ್ಹಾಪುರ ಜಿಲ್ಲೆಯಲ್ಲಿ ತೀವ್ರ ಉದ್ವಿಗ್ನತೆ ತಲೆದೋರಿದ ಪರಿಣಾಮವಾಗಿ ಅಲ್ಲಿ ಇಂಟರ್ನೆಟ್ ಸೇವೆಗಳನ್ನು ಅಮಾನತುಗೊಳಿಸಲಾಗಿದೆ.
ದಲಿತ ಸಮೂಹಗಳ ರಾಲಿ ಮತ್ತು ಶಿವಸೇನೆ ಶಾಸಕ ರಾಜೇಶ್ ಕ್ಷೀರಸಾಗರ್ ನೇತೃತ್ವದ ರಾಲಿಗಳಲ್ಲಿ ಭಾಗಿಯಾದವರು ಪರಸ್ಪರರ ವಿರುದ್ಧ ಕೈಕೈ ಮಿಲಾಯಿಸಿ ಕಾಳಗ ನಡೆಸಿದ್ದರು. ಮರಾಠಾವಾಡ ಪ್ರಾಂತ್ಯದ ಪರ್ಭಾನಿ ಜಿಲ್ಲೆಯಲ್ಲಿ ಆರ್ಎಸ್ಎಸ್ ಕಚೇರಿಯೊಂದನ್ನು ಪ್ರತಿಭಟನಕಾರರು ಧ್ವಂಸಗೊಳಿಸಿದ್ದರು.