ದಯಾಮರಣಕ್ಕೆ ಅನುಮತಿ ಕೋರಿದ ಮಹಾರಾಷ್ಟ್ರದ 91 ರೈತರು
Team Udayavani, Mar 26, 2018, 4:01 PM IST
ಮುಂಬಯಿ : ಮಹಾರಾಷ್ಟ್ರದ ಅಮರಾವತಿಯಲ್ಲಿನ ಬುಲ್ಡಾನಾ ಜಿಲ್ಲೆಯ 91 ರೈತರನ್ನು ಒಳಗೊಂಡ ಸಮೂಹವೊಂದು, “ರಾಜ್ಯ ಸರಕಾರ ನಮ್ಮ ಕೃಷಿ ಉತ್ಪನ್ನಗಳಿಗೆ ಯೋಗ್ಯವಾದ ಬೆಲೆ ಕೊಡುತ್ತಿಲ್ಲವಾದ್ದರಿಂದ ನಮಗೆ ಬದುಕು ಅಸಾಧ್ಯವಾಗಿದೆ; ಆದುದರಿಂದ ನಮಗೆ ದಯಾಮರಣಕ್ಕೆ ಅನುಮತಿ ನೀಡಬೇಕು’ ಎಂದು ರಾಜ್ಯಪಾಲರನ್ನು ಒತ್ತಾಯಿಸಿದೆ.
ರಾಜ್ಯಪಾಲರು ಮತ್ತು ಉಪ ವಿಭಾಗೀಯ ಮ್ಯಾಜಿಸ್ಟ್ರೇಟರಿಗೆ ಸಲ್ಲಿಸಲಾಗಿರುವ ಪತ್ರದಲ್ಲಿ ರೈತರು “ನಮಗಿನ್ನೂ ನಮ್ಮ ಕೃಷಿ ಉತ್ಪನ್ನಗಳಿಗೆ ಯೋಗ್ಯವಾದ ಬೆಲೆಯನ್ನು ಸರಕಾರ ಕೊಟ್ಟಿಲ್ಲ; ಮಾತ್ರವಲ್ಲದೆ ಹೆದ್ದಾರಿ ನಿರ್ಮಾಣಕ್ಕಾಗಿ ಸ್ವಾಧೀನ ಪಡಿಸಿಕೊಳ್ಳಲಾಗಿರುವ ನಮ್ಮ ಭೂಮಿಗೆ ಸರಕಾರ ಇನ್ನೂ ಪರಿಹಾರ ಧನವನ್ನೇ ಕೊಟ್ಟಿಲ್ಲ.
ಆದುದರಿಂದ ನಮಗೆ ಬಾಳ್ವೆಯೇ ಅಸಾಧ್ಯವಾಗಿದೆ. ನಮ್ಮ ಕುಟುಂಬದವರನ್ನು, ಮನೆ ಮಂದಿಯನ್ನು ಪೋಷಿಸುವ ಶಕ್ತಿ ನಮಗೆ ಇಲ್ಲವಾಗಿದೆ. ಹಾಗಿರುವಾಗ ನಮಗೆ ದಯಾಮರಣಕ್ಕೆ ಅನುಮತಿ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.