ಸೋದರಳಿಯ ಆಕಾಶ್ ರಾಜಕೀಯಕ್ಕೆ ; ಮಾಯಾವತಿ ಉತ್ತರಾಧಿಕಾರಿಯೇ?
Team Udayavani, Jan 17, 2019, 1:30 PM IST
ಲಕ್ನೋ:ಅಧಿಕಾರ ದಾಹ ಮತ್ತು ಸ್ವಜನ ಪಕ್ಷಪಾತದ ಆರೋಪಗಳ ನಡುವೆಯೇ ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಅವರು ಸೋದರಳಿಯ ಆಕಾಶ್ ಅವರನ್ನು ರಾಜಕೀಯಕ್ಕೆ ಕರೆತಂದಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮಾಯಾವತಿ, ಆಕಾಶ್ ರಾಜಕೀಯ ಪಟ್ಟುಗಳನ್ನು ಕಲಿಯುವ ಸಲುವಾಗಿ ಬಿಎಸ್ಪಿ ಚಳುವಳಿಗೆ ಧುಮುಕುತ್ತಿದ್ದಾನೆ ಎಂದರು.
ಟೀಕೆಗಳಿಗೆ ತಿರುಗೇಟು ನೀಡಿ ನನ್ನ ಕಿರಿಯ ಸಹೋದರ ಆನಂದ್ ಕುಮಾರ್ ಮತ್ತು ಕುಟುಂಬ 2003 ರಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ ಆದರೆ ಯಾವುದೇ ಸ್ಥಾನ ಮಾನ ಪಡೆದಿಲ್ಲ. ನಾನು ಕಾನ್ಷಿರಾಮ್ ಅವರು ಅನುಯಾಯಿ . ಕೆಲ ವಿರೋಧಿಗಳಿಗೆ ನಮ್ಮ ಜನಪ್ರಿಯತೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಇದಕ್ಕೆ ಕೆಲ ಜಾತಿವಾದಿ ಮಾಧ್ಯಮಗಳೂ ಬೆಂಬಲ ನೀಡಿವೆ ಎಂದು ಕಿಡಿ ಕಾರಿದರು.
ಬಿಎಸ್ಪಿ ಮತ್ತು ಎಸ್ಪಿ ಮೈತ್ರಿಯ ಜನಪ್ರಿಯತೆ ಉಳಿದ ಪಕ್ಷಗಳು ಮತ್ತು ನಾಯಕರ ನಿದ್ದೆ ಕೆಡಿಸಿದೆ ಎಂದರು.
ಬಿಜೆಪಿ ದಲಿತ ವಿರೋಧಿ ಮತ್ತು ಜಾತಿವಾದಿ ಪಕ್ಷ , ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುವುದನ್ನು ಬಿಟ್ಟು ಅಸಂಬದ್ಧ ಟೀಕೆಗಳನ್ನು ಮಾಡುತ್ತಿದೆ. ಜನತೆ ಮುಂದಿನ ಚುನಾವಣೆಯಲ್ಲಿ ತಿರಸ್ಕರಿಸುವುದು ಖಂಡಿತ ಎಂದಿದ್ದಾರೆ.
ಆಕಾಶ್ ರಾಜಕೀಯ ಪ್ರವೇಶದ ಕುರಿತು ಕೆಲ ಮಾಧ್ಯಮಗಳು ಮಾಯಾವತಿಯ ಉತ್ತರಾಧಿಕಾರಿ ಎಂದು ಬಿಂಬಿಸಿ ವರದಿ ಮಾಡಿದ್ದವು. ಆ ಬಳಿಕ ಮಾಯಾವತಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.