ಮುಲಾಯಂ ಶಾಸಕರಾಗುವುದಕ್ಕಾಗಿ ಒಂದು ಹೊತ್ತು ಊಟ ಬಿಟ್ಟಿದ್ದ ಗ್ರಾಮಸ್ಥರು
ಭೂಮಿ ಪುತ್ರನ ಗ್ರಾಮದಲ್ಲಿ ಮೌನ!
Team Udayavani, Oct 11, 2022, 6:10 AM IST
ಲಕ್ನೋ: ಸಮಾಜವಾದಿ ಪಕ್ಷದ ಸ್ಥಾಪಕ, ಉತ್ತರಪ್ರದೇಶ ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್(82) ಅವರ ಸಾವಿನ ಸುದ್ದಿ ಕೇಳಿ ಅವರ ಹುಟ್ಟೂರು ಸೈಫಾಯಿಯಲ್ಲಿ ನೀರವತೆ ಆವರಿಸಿದೆ.
ಸೋಮವಾರ ಇಡೀ ದಿನ ಪ್ರತಿಯೊಬ್ಬರ ಬಾಯಿಯಲ್ಲೂ “ಮಣ್ಣಿನ ಮಗ'(ಧರ್ತಿ ಪುತ್ರ) ನದ್ದೇ ಮಾತು. ಎಲ್ಲಿ ನೋಡಿದರೂ ನೇತಾಜಿಯನ್ನು ನೆನಪಿಸಿಕೊಂಡು ಕಣ್ಣೀರಿಡುವವರೇ. 1967ರಲ್ಲಿ ಮುಲಾಯಂ ಅವರು ಮೊದಲ ಬಾರಿಗೆ ಚುನಾವ ಣೆಯಲ್ಲಿ ಸ್ಪರ್ಧಿಸಿದಾಗ ಅವರು ಶಾಸಕರಾಗ ಬೇಕೆಂದು ಪೂರ್ತಿ ಗ್ರಾಮವೇ ಪ್ರತಿದಿನ ಒಂದು ಹೊತ್ತು ಊಟ ಬಿಟ್ಟಿದ್ದನ್ನು ಗ್ರಾಮದ ಹಿರಿಯರು ನೆನಪಿಸಿಕೊಂಡಿದ್ದಾರೆ.
1967ರ ವಿಧಾನಸಭೆ ಚುನಾವಣೆಯಲ್ಲಿ, ಮುಲಾಯಂಗೆ ಕಣಕ್ಕಿಳಿಯಬೇಕೆಂಬ ಆಸೆಯಿತ್ತು. ಆದರೆ ಅವರ ಬಳಿ ಸಾಕಷ್ಟು ಹಣವಿರಲಿಲ್ಲ. ಪ್ರಚಾರ ಆರಂಭಕ್ಕೂ ಮೊದಲು ಅವರ ಮನೆಯ ಟೆರೇಸ್ನಲ್ಲಿ ಗ್ರಾಮಸ್ಥರ ಸಭೆ ನಡೆದಿತ್ತು. ಅಲ್ಲಿ ಊರಿನ ಹಿರಿಯರೊಬ್ಬರು, “ಗ್ರಾಮಸ್ಥರು ದಿನಕ್ಕೆ ಒಂದು ಹೊತ್ತು ಊಟ ಬಿಟ್ಟರೆ, ಆ ಹಣದಲ್ಲಿ ಮುಲಾಯಂ 8 ದಿನ ಕಾರು ಓಡಿಸಬಹುದು’ ಎಂದು ಸಲಹೆ ಕೊಟ್ಟರು. ಅದನ್ನು ಪೂರ್ತಿ ಗ್ರಾಮವೇ ಒಪ್ಪಿ ಕೊಂಡು, ಮುಲಾಯಂಗಾಗಿ ಹಣ ಸಂಗ್ರಹಿಸಿ, ಪ್ರಚಾರಕ್ಕೆ ಸಹಾಯ ಮಾಡಿತು.
ಊರಿಗೆ ಊರೇ ಮುಲಾಯಂ ಬೆನ್ನಿಗೆ ನಿಂತಿತು. ಅವರೆಲ್ಲರ ಸಾಮೂಹಿಕ ಪ್ರಯತ್ನದ ಫಲವಾಗಿ ಮುಲಾಯಂಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಯಿತು. ಉತ್ತಮ ವಾಗ್ಮಿಯೂ ಆಗಿದ್ದ ಮುಲಾಯಂ, “ನನಗೆ ಒಂದು ವೋಟು ಮತ್ತು ಒಂದು ನೋಟು(1 ರೂ.) ಕೊಡಿ. ಶಾಸಕನಾದ ಮೇಲೆ ಅದನ್ನು ಬಡ್ಡಿ ಸಮೇತ ಹಿಂದಿರುಗಿಸುವೆ’ ಎಂದು ಮನವಿ ಮಾಡಿ, ಪ್ರಚಾರ ಮಾಡಿದ್ದರು. ಅದರ ಫಲವೆಂಬಂತೆ, ಇಟಾವಾ ಜಿಲ್ಲೆಯ ಜಸ್ವಂತ್ ನಗರದಿಂದ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದರು.
ಅವರು ಎಷ್ಟೇ ಎತ್ತರಕ್ಕೇರಿದರೂ ಗ್ರಾಮಕ್ಕೆ ಬಂದಾಗ “ಹಿಂದಿನ ಮುಲಾಯಂ’ ಆಗಿಯೇ, ಎಲ್ಲರೊಂದಿಗೂ ಕುಳಿತು ಹಳೆಯ ಕಥೆಗಳನ್ನು ನೆನಪಿಸಿಕೊಂಡು ಹರಟುತ್ತಿದ್ದರು ಎಂದೂ ಗ್ರಾಮಸ್ಥರು ನೆನಪಿಸಿಕೊಳ್ಳುತ್ತಾ ಕಣ್ಣೀರಾಗುತ್ತಾರೆ.
ಇಂದು ಅಂತ್ಯಕ್ರಿಯೆ: ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಹುಟ್ಟೂರು ಸೈಫಾಯಿಯಲ್ಲೇ ಅವರ ಅಂತ್ಯಕ್ರಿಯೆ ನೆರವೇರಲಿದೆ. ಜಿಲ್ಲೆಯ ಎಲ್ಲ ವ್ಯಾಪಾರಿ ಗಳೂ ಮುಲಾಯಂಗೆ ಗೌರವಸೂಚಕ ವಾಗಿ ಅಂಗಡಿ-ಮುಂಗಟ್ಟು, ಮಾರುಕಟ್ಟೆಗಳನ್ನು ಬಂದ್ ಮಾಡಿದ್ದಾರೆ. ಮಂಗಳವಾರವೂ ಸ್ವಯಂಪ್ರೇರಿತವಾಗಿ ಮಾರುಕಟ್ಟೆ ಬಂದ್ ಮಾಡುವುದಾಗಿ ಹೇಳಿದ್ದಾರೆ. ಸೋಮವಾರ ಸಂಜೆಯೇ ಪಾರ್ಥಿವ ಶರೀರವನ್ನು ಹುಟ್ಟೂರಿಗೆ ತಂದು, ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಕಣ್ಣೀರಿಡುತ್ತಿದ್ದ ಪುತ್ರ ಅಖೀಲೇಶ್ ಯಾದವ್ರನ್ನು ಚಿಕ್ಕಪ್ಪ ಶಿವಪಾಲ್ ಯಾದವ್ ಸಂತೈಸುತ್ತಿದ್ದುದನ್ನು ಕಂಡು, ಅಲ್ಲಿದ್ದವರ ಕಣ್ಣಾಲಿಗಳೂ ತುಂಬಿ ಬಂದಿವೆ. ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಜಲಶಕ್ತಿ ಸಚಿವ ಸ್ವತಂತ್ರದೇವ್ ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ಭೂಪೇಂದ್ರ ಸಿಂಗ್ ಚೌಧರಿ ಆಗಮಿಸಿ, ಮೃತರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.
ಸ್ನೇಹವನ್ನು ಬಿಚ್ಚಿಟ್ಟ ಪ್ರಧಾನಿ ಮೋದಿ
ಕೆಲವೊಮ್ಮೆ ಪರಸ್ಪರ ವಾಗ್ಧಾಳಿ, ಅನಂತರ ಕೈ-ಕೈ ಹಿಡಿದು ಸವಾರಿ… ಇದು ಮುಲಾಯಂ ಸಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವೆ ಇದ್ದ ಸ್ನೇಹಕ್ಕೆ ಸಾಕ್ಷಿ. ಮುಲಾಯಂ ನಿಧನದ ಬೆನ್ನಲ್ಲೇ ಪ್ರಧಾನಿ ಮೋದಿ ಅವರೇ ಈ ವಿಚಾರವನ್ನು ಪ್ರಸ್ತಾಪಿಸಿ, ತಮ್ಮ ನಡುವಿನ ವಿಶೇಷ ಸಂಬಂಧವನ್ನು ಬಿಚ್ಚಿಟ್ಟಿದ್ದಾರೆ. 2019ರ ಲೋಕಸಭೆ ಚುನಾವಣೆಗೂ ಮುನ್ನ, ಲೋಕಸಭೆಯಲ್ಲಿ ವಿಪಕ್ಷಗಳ ಬೆಂಚಿನಲ್ಲಿ ಕುಳಿತಿದ್ದ ಮುಲಾಯಂ, “ಮೋದಿ ಮತ್ತೆ ಪ್ರಧಾನಿಯಾಗಿ ಬರುತ್ತಾರೆಂಬ ವಿಶ್ವಾಸವಿದೆ’ ಎಂದು ಹೇಳಿದ್ದರು. ಅವರ ಹೇಳಿಕೆಗೆ ಇಡೀ ವಿಪಕ್ಷವೇ ನಿಬ್ಬೆರಗಾಗಿತ್ತು. ಅದನ್ನು ಈಗ ನೆನಪಿಸಿಕೊಂಡಿರುವ ಮೋದಿ, “ರಾಜಕೀಯ ಭಿನ್ನಾಭಿಪ್ರಾಯಗಳ ನಡುವೆಯೂ, ಮುಲಾಯಂರಂಥ ಹಿರಿಯರು ಅಂದು ನೀಡಿದ್ದ ಹೇಳಿಕೆಯು ನನಗೆ ಹಾರೈಕೆಯಾಗಿ ಬದಲಾಯಿತು’ ಎಂದಿದ್ದಾರೆ.
ಅಗಲಿದ ನಾಯಕನಿಗೆ ಗಣ್ಯರ ಕಂಬನಿ
ಮುಲಾಯಂ ಅವರ ನಿಧನಕ್ಕೆ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಎಲ್ಲ ರಾಜಕೀಯ ಪಕ್ಷಗಳ ನಾಯಕರೂ ಕಂಬನಿ ಮಿಡಿದಿದ್ದಾರೆ. ಮುಲಾಯಂ ಅವರ ನಿಧನವು ದೇಶದ ರಾಜಕಾರಣಕ್ಕೆ ತುಂಬಲಾರದ ನಷ್ಟ ಎಂದೂ ಬಣ್ಣಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ, ಮಾಜಿ ಪ್ರಧಾನಿಗಳಾದ ಡಾ| ಮನಮೋಹನ್ ಸಿಂಗ್, ಎಚ್.ಡಿ.ದೇವೇಗೌಡ, ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಿಎಂಗಳಾದ ಬಸವರಾಜ ಬೊಮ್ಮಾಯಿ, ನಿತೀಶ್ಕುಮಾರ್, ಕೇಜ್ರಿವಾಲ್, ಕೆ.ಸಿ.ಆರ್, ಸ್ಟಾಲಿನ್, ಪಿಣರಾಯಿ ವಿಜಯನ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಭೂಮಿ ಪುತ್ರ ಮುಲಾಯಂ ಅವರನ್ನು ಎಲ್ಲ ಪಕ್ಷಗಳ ನಾಯಕರೂ ಗೌರವಿಸುತ್ತಿದ್ದರು. ಅವರ ನಿಧನ ನೋವು ತಂದಿದೆ. ಅವರ ಕುಟುಂಬಕ್ಕೆ ಸಾಂತ್ವನ ಹೇಳಬಯಸುತ್ತೇನೆ.
-ದ್ರೌಪದಿ ಮುರ್ಮು, ರಾಷ್ಟ್ರಪತಿ
ಮುಲಾಯಂ ಸಿಂಗ್ರ ನಿಧನದ ಮೂಲಕ ಸಮಾಜವಾದಿ ಚಿಂತನೆಗಳ ಧ್ವನಿಯೊಂದು ಮೌನವಾಯಿತು.
-ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷೆ
ತುರ್ತು ಪರಿಸ್ಥಿತಿ ಕಾಲದಲ್ಲಿ ಪ್ರಜಾಸತ್ತೆಯ ಪುನಸ್ಥಾಪನೆಗಾಗಿ ಅವರು ಧ್ವನಿಯೆತ್ತಿದ್ದರು. ಅವರ ನಿಧನದಿಂದ ಭಾರತೀಯ ರಾಜಕಾರಣದ ಯುಗವೊಂದು ಅಂತ್ಯವಾಗಿದೆ.
-ಅಮಿತ್ ಶಾ, ಕೇಂದ್ರ ಗೃಹ ಸಚಿವ
ಮುಲಾಯಂ ಸಿಂಗ್ ಅವರು ಸಮಾಜವಾದಿ ಚಳವಳಿಯ ನೇತಾರ, ಶ್ರೇಷ್ಠ ಸಂಸದೀಯ ಪಟು, ವಿಶಿಷ್ಟ ಆಡಳಿತಗಾರ. ತಮ್ಮ ಇಡೀ ಬದುಕನ್ನು ಬಡವರು ಹಾಗೂ ಇತರೆ ಹಿಂದುಳಿದ ಸಮುದಾಯದ ಸೇವೆಗಾಗಿ ಮುಡುಪಾಗಿಟ್ಟವರು.
-ಡಾ| ಮನಮೋಹನ್ ಸಿಂಗ್, ಮಾಜಿ ಪ್ರಧಾನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?