ದೇಶದಲ್ಲಿ ಮುಸ್ಲಿಮರ ಹಕ್ಕುಗಳ ರಕ್ಷಣೆಗಾಗಿ ಸುರಕ್ಷತಾ ಕಾಯ್ದೆ ತರಬೇಕು: ಜೆಡಿಯು ನಾಯಕ
ವಿವಾದಾತ್ಮಕ ಹೇಳಿಕೆಗೆ ಸಮರ್ಥನೆ...
Team Udayavani, Jan 20, 2023, 3:43 PM IST
ಪಾಟ್ನಾ: ಮುಸ್ಲಿಮರ ಹಕ್ಕುಗಳ ರಕ್ಷಣೆಗಾಗಿ ಮುಸ್ಲಿಂ ಸುರಕ್ಷತಾ ಕಾಯ್ದೆ ತರಬೇಕು ಎಂದು ಜೆಡಿಯು ನಾಯಕ ಗುಲಾಂ ರಸೂಲ್ ಬಲ್ಯಾವಿ ಹೇಳಿಕೆ ನೀಡಿದ್ದಾರೆ.
‘ಹರ್ ಶೆಹರ್ ಕೊ ಕರ್ಬಲಾ ಬನಾ ದೇಂಗೆ’ ಎಂಬ ವಿವಾದಾತ್ಮಕ ಹೇಳಿಕೆಯನ್ನು ಸಮರ್ಥಿಸಿಕೊಂಡ ಗುಲಾಂ ರಸೂಲ್, ನಾವು ನಗರಗಳನ್ನು ಕರ್ಬಲಾವನ್ನಾಗಿ ಮಾಡುತ್ತೇವೆ ಎಂದು ನಾನು ಹೇಳಿದ್ದೇನೆ, ಅದಕ್ಕೆ ಬದ್ಧನಾಗಿ ನಿಲ್ಲುತ್ತೇನೆ ಎಂದು ಒಪ್ಪಿಕೊಳ್ಳುತ್ತೇನೆ. ಕರ್ಬಲಾ ಎಂದರೆ ಎಲ್ಲವನ್ನೂ ನೀಡುವುದು, ಎಲ್ಲವನ್ನೂ ತ್ಯಾಗ ಮಾಡುವುದು, ಆದರೆ ಮಾನವೀಯತೆ ಮತ್ತು ಸಹೋದರತ್ವವನ್ನು ಬಲಿಕೊಡಲು ಬಿಡಬಾರದು ಎಂದಿದ್ದಾರೆ.
ಈ ಸಮಯದಲ್ಲಿ, ದೇಶದಲ್ಲಿ, ನಮ್ಮ ಮಕ್ಕಳನ್ನು ಭಯೋತ್ಪಾದಕರು ಎಂಬ ಹಣೆಪಟ್ಟಿ ಹಚ್ಚಿ ಎತ್ತಿಕೊಂಡು ಹೋಗಲಾಗುತ್ತಿದೆ, 18-20 ವರ್ಷಗಳ ಕಾಲ ಜೈಲಿನ ಹಿಂದೆ ಇಡಲಾಗುತ್ತಿದೆ. ನಮ್ಮ ಮಕ್ಕಳು ಪ್ರತಿಭಟನೆಗೆ ಹೊರಟರೆ ಗುಂಡು ಹಾರಿಸುತ್ತಾರೆ. ಮುಸ್ಲಿಮರ ಹಕ್ಕುಗಳ ರಕ್ಷಣೆಗಾಗಿ ಮುಸ್ಲಿಂ ಸುರಕ್ಷತಾ ಕಾಯ್ದೆ ತರಬೇಕು ಎಂದು ರಸೂಲ್ ಬಲ್ಯಾವಿ ಒತ್ತಾಯಿಸಿದ್ದಾರೆ.