ಜಾತಿನಿಂದನೆ: ರಾತ್ರೋರಾತ್ರಿ 17ಕಿ.ಮೀ ನಡೆದ ವಿದ್ಯಾರ್ಥಿನಿಯರು!
Team Udayavani, Jan 17, 2023, 9:15 PM IST
ರಾಂಚಿ: ಜಾತಿನಿಂದನೆ ಮಾಡುತ್ತಿದ್ದ ಹಾಸ್ಟೆಲ್ ವಾರ್ಡನ್ ವಿರುದ್ಧ ದೂರು ನೀಡುವುದಕ್ಕಾಗಿ 60 ವಿದ್ಯಾರ್ಥಿನಿಯರು ರಾತ್ರೋರಾತ್ರಿ 17 ಕಿ.ಮೀ. ನಡೆದು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿರುವ ಘಟನೆ ಜಾರ್ಖಂಡ್ನಲ್ಲಿ ವರದಿಯಾಗಿದೆ.
ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯ ಚಾಯಿಬಾಸಾ ನಗರದ ಖುಂಟ್ಪಾನೀಯ ಕಸ್ತೂರ್ ಭಾ ವಸತಿ ಶಾಲೆಯ 11ನೇ ತರಗತಿಯ ವಿದ್ಯಾರ್ಥಿನಿಯರು ವಾರ್ಡನ್ನ ಹಿಂಸೆ ತಾಳಲಾರದೆ, ನಿರ್ಜನ ರಸ್ತೆಯಲ್ಲೇ ನಡೆದು, ಜಿಲ್ಲಾಧಿಕಾರಿ ಅನನ್ಯ ಮಿಥಲ್ ಅವರನ್ನು ಭೇಟಿಯಾಗಿದ್ದಾರೆ.
ಹಳಸಿದ ಆಹಾರ ನೀಡುವುದಲ್ಲದೇ, ಶೌಚಾಲಯಗಳನ್ನು ತೊಳೆಯುವಂತೆ ಹಿಂಸೆ ನೀಡಿ, ಕೆಳಜಾತಿಯ ವಿದ್ಯಾರ್ಥಿನಿಯರು ಚಾಪೆ ಮೇಲೆ ಮಲಗಬೇಕು ಎಂದು ವಾರ್ಡನ್ ಒತ್ತಾಯಿಸಿದ್ದಾರೆ. ಇದನ್ನು ಪ್ರಶ್ನಿಸಿದ ವಿದ್ಯಾರ್ಥಿನಿಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಿದ್ದಾರೆ. ಡಿಸಿ ಅನನ್ಯಾ ಈ ಕುರಿತು ತನಿಖೆಗೆ ಆದೇಶಿಸಿದ್ದಾರೆ.