ಪೂಂಚ್: ಹಠಾತ್ ಪ್ರವಾಹದಲ್ಲಿ ಕೊಚ್ಚಿ ಹೋದ ಇಬ್ಬರು ಸೈನಿಕರು
Team Udayavani, Jul 9, 2023, 2:56 PM IST
ಪೂಂಚ್: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಭಾರೀ ಮಳೆಯಿಂದ ಉಂಟಾದ ಹಠಾತ್ ಪ್ರವಾಹಕ್ಕೆ ಸಿಲುಕಿ ಇಬ್ಬರು ಯೋಧರು ಸಾವನ್ನಪ್ಪಿದ್ದಾರೆ. ಶನಿವಾರ ಸುರನ್ ಕೋಟೆ ಪ್ರದೇಶದ ಡೋಗ್ರಾ ನಾಲಾವನ್ನು ದಾಟುತ್ತಿದ್ದ ಸೈನಿಕರು ಬಲವಾದ ಪ್ರವಾಹಕ್ಕೆ ಸಿಲುಕಿದರು ಎಂದು ಭಾರತೀಯ ಸೇನೆ ತಿಳಿಸಿದೆ.
ಶನಿವಾರ ರಾತ್ರಿ ನಾಯಬ್ ಸುಬೇದಾರ್ ಕುಲದೀಪ್ ಸಿಂಗ್ ಅವರ ಮೃತದೇಹವನ್ನು ಹೊಳೆಯಿಂದ ಹೊರತೆಗೆಯಲಾಗಿದ್ದು, ಇಂದು ಸಿಪಾಯಿ ತೇಲು ರಾಮ್ ಅವರ ಮೃತದೇಹ ಪತ್ತೆಯಾಗಿದೆ.
ಶ್ರದ್ಧಾಂಜಲಿ ಸಲ್ಲಿಸಿದ ಭಾರತೀಯ ಸೇನೆಯ 16 ಕಾರ್ಪ್ಸ್, “ಪೂಂಚ್ನ ಕಠಿಣ ಭೂಪ್ರದೇಶದಲ್ಲಿ ಏರಿಯಾ ಡಾಮಿನೇಷನ್ ಗಸ್ತು ನಡೆಸುತ್ತಿದ್ದಾಗ ನದಿಯನ್ನು ದಾಟುತ್ತಿದ್ದಾಗ ಹಠಾತ್ ಪ್ರವಾಹದಲ್ಲಿ ಕೊಚ್ಚಿಹೋದ ಎನ್ ಬಿ ಸಬ್ ಕುಲದೀಪ್ ಸಿಂಗ್ ಅವರ ಸರ್ವೋಚ್ಚ ತ್ಯಾಗಕ್ಕೆ ಎಲ್ಲಾ ಶ್ರೇಣಿಯ ವಂದನೆಗಳು. ಭಾರತೀಯ ಸೇನೆಯು ದುಃಖತಪ್ತ ಕುಟುಂಬದೊಂದಿಗೆ ಒಗ್ಗಟ್ಟಿನಿಂದ ನಿಂತಿದೆ” ಎಂದಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಸತತ ಮೂರನೇ ದಿನವೂ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಎರಡು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.