ದಯಾಮರಣ ಕೋರಿದ ಪುರಿ ದೇಗುಲ ಅರ್ಚಕ
Team Udayavani, Nov 2, 2018, 1:59 PM IST
ಭುವನೇಶ್ವರ: ಒಡಿಶಾದ ಪುರಿ ಜಗನ್ನಾಥ ದೇಗುಲದ ಅರ್ಚಕರಿಗೆ ಭಕ್ತರು ಕಾಣಿಕೆ, ಉಡುಗೊರೆ ನೀಡುವುದನ್ನು ನಿಷೇಧಿಸಿದ್ದರಿಂದ ನೊಂದು ಅರ್ಚಕರೊಬ್ಬರು ದಯಾ ಮರಣಕ್ಕೆ ಅನುಮತಿ ಕೋರಿ ಸುಪ್ರೀಂಕೋರ್ಟ್ಗೆ ಪತ್ರ ಬರೆದಿದ್ದಾರೆ.
ಅರ್ಚಕ ನರಸಿಂಗ ಪೂಜಪಂಡ ಎಂಬವರೇ ಈ ಪತ್ರ ಬರೆದವರು. ಸಾವಿರಾರು ವರ್ಷಗಳಿಂದ ಅರ್ಚಕರಿಗೆ ದೇಗುಲಕ್ಕೆ ಬರುವ ಭಕ್ತರು ಕಾಣಿಕೆ, ಉಡುಗೊರೆ ನೀಡುತ್ತಾ ಬಂದಿದ್ದಾರೆ. ಅದು ನಮ್ಮ ಆದಾಯದ ಮೂಲವಾಗಿತ್ತು. ಅದರ ಮೇಲೆ ನಿಷೇಧ ಹೇರಿದ್ದರಿಂದ ಜೀವನಕ್ಕೆ ತೊಂದರೆಯಾಗಿದೆ. ಹಸಿವಿಂದ ಸಾಯುವುದಕ್ಕಿಂತ ದಯಾಮರಣ ಲೇಸು. ಹೀಗಾಗಿ ದಯಾಮರಣಕ್ಕೆ ಅನುಮತಿ ನೀಡಬೇಕು. ಈ ಬಗ್ಗೆ ಒಡಿಶಾ ಸರಕಾರಕ್ಕೆ ಮನವಿ ಮಾಡಿಕೊಂಡರೂ, ತಿರಸ್ಕೃತಗೊಂಡಿದೆ ಎಂದು ಅಹವಾಲು ಸಲ್ಲಿಸಿದ್ದಾರೆ.
ಜುಲೈನಲ್ಲಿ ನಡೆದಿದ್ದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್, ದೇಗುಲ ಸುಧಾರಣೆಗೆ 12 ಸೂತ್ರಗಳನ್ನು ಸೂಚಿಸಿತ್ತು. ಅದರಲ್ಲಿ ಅರ್ಚಕರು ಮತ್ತು ಸೇವಕರು ಯಾವುದೇ ಕಾಣಿಕೆ, ಉಡುಗೊರೆ ನೀಡುವಂತೆ ಭಕ್ತರಿಗೆ ಒತ್ತಡ ಹೇರುವಂತಿಲ್ಲ ಎಂದು ತಿಳಿಸಲಾಗಿತ್ತು. 12 ಸೂತ್ರಗಳ ಪೈಕಿ 9ಕ್ಕೆ ದೇಗುಲದ ಉದ್ಯೋಗಿಗಳು, ಸಿಬಂದಿ ಸಹಮತ ವ್ಯಕ್ತಪಡಿಸಿದ್ದಾರೆ.