Madhya Pradesh; ಮತಾಂತರಗೊಳಿಸಿ ಉಗ್ರ ಕೃತ್ಯಕ್ಕೆ ಹಿಂದೂಗಳನ್ನೇ ಬಳಕೆ
ಮಧ್ಯಪ್ರದೇಶದಲ್ಲಿ ಘಾತಕ ಜಾಲ ಬಯಲು, ಎಟಿಎಸ್ನಿಂದ 19 ಮಂದಿ ಬಂಧನ
Team Udayavani, May 17, 2023, 6:55 AM IST
ಭೋಪಾಲ: ಹಿಂದೂಗಳನ್ನು ಮತಾಂತರ ಮಾಡುವ ಬೃಹತ್ ಜಾಲವನ್ನು ಮಧ್ಯಪ್ರದೇಶ ಪೊಲೀಸ್ ಇಲಾಖೆಯ ಉಗ್ರ ನಿಗ್ರಹ ಪಡೆ ಛೇದಿಸಿದೆ. ಹಿಜ್º-ಉತ್-ತಹಿರ್ರ (ಎಚ್ಯುಟಿ) ಎಂಬ ಸಂಘಟನೆಯು ಈ ಕರಾಳ ಜಾಲದ ಹಿಂದೆ ಕೆಲಸ ಮಾಡುತ್ತಿದೆ. ಆ ಸಂಘಟನೆಗೆ ಸೇರಿದ್ದಾರೆ ಎಂದು ಹೇಳಲಾಗಿರುವ ಐವರು ಹಿಂದೂ ಸಮುದಾಯದ ಯುವತಿಯರನ್ನು ಮದುವೆಯಾಗಿ, ಮತಾಂತರ ಮಾಡಿದ್ದಾರೆ ಎಂದು ಮಧ್ಯಪ್ರದೇಶ ಎಟಿಎಸ್ ಆರೋಪಿಸಿದೆ.
ಆಘಾತಕಾರಿ ವಿಚಾರವೆಂದರೆ, ಈ ಕೃತ್ಯದಲ್ಲಿ ಭಾಗಿಗಳಾಗಿದ್ದವರು ಮೂಲತಃ ಹಿಂದೂಗಳೇ ಆಗಿದ್ದಾರೆ. ಈ ಪೈಕಿ ಹೈದರಾಬಾದ್ ಮೂಲದ ಮೊಹಮ್ಮದ್ ಸಲೀಂ ಮೂಲದಲ್ಲಿ ಸೌರಭ್ ರಾಜ್ವೈದ್ಯ. ಆತನ ತಂದೆ ಡಾ. ಅಶೋಕ್ ಜೈನ್ ವೈದ್ಯರಾಗಿದ್ದವರು.
ಇದಲ್ಲದೆ ದೇವಿ ನಾರಾಯಣ ಪಾಂಡ (ಈಗ ಅಬ್ದುರ್ ರೆಹಮಾನ್), ಬೇನು ಕುಮಾರ್ (ಈಗ ಮೊಹಮ್ಮದ್ ಅಬ್ಬಾಸ್ ಅಲಿ) ಅವರು ಮುಸ್ಲಿಂ ಸಮುದಾಯಕ್ಕೆ ಮತಾಂತರದ ಬಳಿಕ ಹಿಂದೂ ಸಮುದಾಯದ ಯುವತಿಯರನ್ನೇ ಗುರಿಯಾಗಿಸಿಕೊಂಡಿದ್ದಾರೆ. ಇಂಥ ಒಂದು ಜಾಲ ದೇಶದಲ್ಲಿಯೇ ಮೊದಲು ಎಂದು ಎಟಿಎಸ್ ಹೇಳಿಕೊಂಡಿದೆ.
ಭೋಪಾಲದಲ್ಲಿ ಇರುವ ಜಿಮ್ ಟ್ರೈನರ್ ಯಾಸಿರ್ ಖಾನ್ ಮತ್ತು ಹೈದರಾಬಾದ್ನ ಮೊಹಮ್ಮದ್ ಸಲೀಮ್ ಅವರೇ ಈ ಜಾಲದ ರೂವಾರಿಗಳು. ಈ ಪೈಕಿ ಸಲೀಂ ಹೈದರಾಬಾದ್ನಲ್ಲಿ ಇರುವ ಪ್ರಭಾವಿ ರಾಜಕೀಯ ವ್ಯಕ್ತಿಯ ಮಾಲೀಕತ್ವದ ಫಾರ್ಮಸಿ ಕಾಲೇಜಿನ ಪ್ರಾಧ್ಯಾಪಕನಾಗಿದ್ದಾನೆ.
ಸೌರಭ್ ರಾಜ್ವೈದ್ಯನ ಹತ್ತವರು ಆರೋಪಿಸುವ ಪ್ರಕಾರ ಪುತ್ರನ ಹಿರಿಯ ಸಹೋದ್ಯೋಗಿ ಡಾ.ಕಮಲ್ ಎಂಬಾತ ಮನಃಪರಿವರ್ತನೆಗೆ ಕಾರಣನಾಗಿದ್ದಾನೆ. ನಂತರವೇ ಆತ ಸಲೀಂ ಆಗಿ ಬದಲಾಗಿದ್ದ. ಆತ ವಿವಾದಿತ ವಿದ್ವಾಂಸ ಡಾ.ಜಕೀರ್ ನಾಯ್ಕನ ವಿಡಿಯೋಗಳನ್ನು ನೋಡುತ್ತಿದ್ದ ಎಂದು ದೂರಿದ್ದಾರೆ. 2010-11ನೇ ಸಾಲಿನಲ್ಲಿ ಆತ ಸಿರಿಯಾಕ್ಕೆ ತೆರಳಲು ಉದ್ದೇಶಿಸಿದ್ದ ಹೆತ್ತವರ ಹೇಳಿಕೆ ಆಧರಿಸಿ “ಎನ್ಡಿಟಿವಿ’ ವರದಿ ಮಾಡಿದೆ.
ಯಾವುದಿದು ಎಚ್ಯುಟಿ?
ಚೀನಾ, ಜರ್ಮನಿ, ರಷ್ಯಾ, ಬಾಂಗ್ಲಾದೇಶ, ಟರ್ಕಿ ಸೇರಿದಂತೆ 16 ದೇಶಗಳಲ್ಲಿ ಇರುವ ಸಂಘಟನೆ. ಪ್ರಕರಣಕ್ಕೆ ಸಂಬಂಧಿಸಿದಂತೆ 19 ಮಂದಿಯನ್ನು ಭೋಪಾಲ, ಛಿಂದ್ವಾರಾ ಮತ್ತು ಹೈದರಾಬಾದ್ನಿಂದ ಬಂಧಿಸಲಾಗಿದೆ. ಸದ್ಯ ಅವರನ್ನು ಮೇ 19ರ ವರೆಗೆ ಎಟಿಎಸ್ ವಶಕ್ಕೆ ಒಪ್ಪಿಸಲಾಗಿದೆ.