ಆಸ್ಪತ್ರೆಗಳಿಗೆ ಹೋಗುವ ಜನರನ್ನು ಉಚಿತವಾಗಿ ಕರೆದುಕೊಂಡು ಹೋಗಿ ಮಾನವೀಯತೆ ಮೆರೆದ ರಿಕ್ಷಾವಾಲ
Team Udayavani, Apr 24, 2021, 3:02 PM IST
ರಾಂಚಿ : ಕೋವಿಡ್ ಜನರನ್ನು ತುಂಬಾ ಕಾಡುತ್ತಿದೆ. ದೇಶದ ನಾನಾ ರಾಜ್ಯಗಳಲ್ಲಿ ವೀಕೆಂಡ್ ಕರ್ಫ್ಯೂ ಸೇರಿದಂತೆ ಲಾಕ್ ಡೌನ್ ಗಳನ್ನು ಘೋಷಣೆ ಮಾಡಲಾಗಿದೆ. ಇನ್ನು ಲಾಕ್ ಡೌನ್ ಮಾಡಿದ ವೇಳೆ ಜನರು ಆಸ್ಪತ್ರೆಗಳಿಗೆ ಹೋಗಲು ಸಾರಿಗೆ ವ್ಯವಸ್ಥೆ ಇಲ್ಲದಾಗಿ ಪರದಾಡುತ್ತಿದ್ದಾರೆ. ಇಂತಹ ಸಂದರ್ಭವನ್ನು ಗಮನದಲ್ಲಿ ಇಟ್ಟುಕೊಂಡು ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ರಿಕ್ಷಾವಾಲ ಮಾನವೀಯತೆ ಮೆರೆದಿದ್ದಾರೆ.
ರಾಂಚಿಯ ಆಟೋ ಚಾಲಕ ರವಿ ಅಗರ್ವಾಲ್ ಕೋವಿಡ್ ನಿಂದ ಬಳಲುತ್ತಿರುವ ಸೋಂಕಿತರಿಗೆ ಮತ್ತು ಆಸ್ಪತ್ರೆಗೆ ಹೋಗಬೇಕೆಂದವರಿಗೆ ಉಚಿತವಾಗಿ ತನ್ನ ಆಟೋದಲ್ಲಿ ಕರೆದುಕೊಂಡು ಹೋಗುತ್ತಿದ್ದಾರೆ. ಅದ್ರಲ್ಲೂ ಕೋವಿಡ್ ಸಂದರ್ಭದಲ್ಲಿ ಸಾರಿಗೆ ವ್ಯವಸ್ಥೆ ಸಿಗದ ಜನರಿಗೆ ಇವರು ಸಹಾಯಾಸ್ತ ಚಾಚಿದ್ದಾರೆ.
ಕಳೆದ ಏಪ್ರಿಲ್ 15 ರಿಂದ ರವಿಯವರು ತಮ್ಮ ಆಟೋವನ್ನು ಉಚಿತ ಸೇವೆಗಾಗಿ ಇಟ್ಟಿದ್ದಾರೆ. ಮಹಿಳೆಯೊಬ್ಬರು ಆಸ್ಪತ್ರೆಗೆ ಹೋಗಲು ಅಸಹಾಯಕರಾಗಿ ನಿಂತ ವೇಳೆ ಬೇರೆ ಯಾವ ಆಟೋ ಚಾಲಕ ಕೂಡ ಆ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ನಿರಾಕರಿಸಿದ್ದಾರೆ. ಇದನ್ನು ಕಂಡ ರವಿ ಅಗರ್ವಾಲ್ ತಾವು ಮುಂದೆ ಬಂದು ಆ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆ ದಿನದಿಂದ ಇಲ್ಲಿಯವರೆಗೆ ಉಚಿತವಾಗಿ ಸೇವೆ ಮಾಡುತ್ತಲೇ ಬಂದಿದ್ದಾರೆ.
ರಾಂಚಿಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಹೆಚ್ಚಾಗುತ್ತಾ ಇದೆ. ಇದನ್ನು ಗಮನಿಸಿದ ರವಿ ಅಗರ್ವಾಲ ಜನರಿಗೆ ಸಹಾಯವಾಗುವ ಅಭಿಯಾನವನ್ನು ಮಾಡಬೇಕೆಂದು ಈ ಕೆಲಸ ಮಾಡಿದ್ದಾರೆ.