ಸಂವಿಧಾನ ಟೀಕಿಸಿದ್ದ ಶಾಸಕ ಮತ್ತೆ ಸಚಿವ
Team Udayavani, Jan 5, 2023, 6:44 AM IST
ತಿರುವನಂತಪುರ: ಆರು ತಿಂಗಳ ಹಿಂದೆ ಸಂವಿಧಾನವನ್ನು ಟೀಕಿಸಿ ವಿವಾದ ಸೃಷ್ಟಿಸಿದ್ದ ಸಿಪಿಎಂ ಮುಖಂಡ, ಶಾಸಕ ಸಾಜಿ ಚೆರಿಯನ್ ಮತ್ತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ರಾಜಭವನದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣ ವಚನ ಬೋಧಿಸಿದರು.
ಕಾಂಗ್ರೆಸ್ ನೇತೃತ್ವದ ಯುಡಿಎಫ್ಗೆ ಆಹ್ವಾನ ರವಾನೆಯಾಗಿದ್ದರೂ, ಪ್ರತಿಭಟನಾರ್ಥವಾಗಿ ಮುಖಂಡರು ಗೈರುಹಾಜರಾಗಿದ್ದರು. ಕೇರಳದಲ್ಲಿ ಬಿಜೆಪಿ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಚೆರಿಯನ್ ಪ್ರಮಾಣ ವಚನದ ವಿರುದ್ಧ ನಡೆದ “ಸಂವಿಧಾನ ರಕ್ಷಣಾ ದಿನ’ ಎಂಬ ಪ್ರತಿಭಟನೆಯನ್ನು ಉದ್ಘಾಟಿಸಿದರು.
ಸಂವಿಧಾನವನ್ನೇ ಟೀಕಿಸಿ ರಾಜೀನಾಮೆ ನೀಡಿದವರನ್ನು ಮತ್ತೆ ಸಂಪುಟಕ್ಕೆ ಸೇರ್ಪಡೆಗೊಳಿಸಿದ್ದು ಇದೇ ಮೊದಲು ಎಂದು ಅವರು ಟೀಕಿಸಿದರು.