ರಾಷ್ಟ್ರಪತಿ ರೇಸ್ನಲ್ಲಿ ಶರದ್ ಪವಾರ್ ಇಲ್ಲ: ಎನ್ಸಿಪಿ
Team Udayavani, Jun 14, 2022, 2:10 PM IST
ಮುಂಬಯಿ: ಕೆಲವು ವಿರೋಧ ಪಕ್ಷಗಳು ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಉಮೇದುವಾರಿಕೆ ಸಲ್ಲಿಸಬೇಕು ಎಂದ ನಂತರ, ಅವರು ಸ್ಪರ್ಧಿಸಲು ಉತ್ಸುಕರಾಗಿಲ್ಲ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
ಮಹಾರಾಷ್ಟ್ರದ ಎನ್ಸಿಪಿ ಸಚಿವರನ್ನು ಪವಾರ್ ಭೇಟಿ ಮಾಡಿದ ನಂತರ ಈ ವಿಷಯ ಚರ್ಚೆಗೆ ಬಂದಿದ್ದು, ಆಮ್ ಆದ್ಮಿ ಪಕ್ಷದ ನಾಯಕ ಸಂಜಯ್ ಸಿಂಗ್ ಅವರು ಭಾನುವಾರ ಪವಾರ್ ಅವರನ್ನು ಭೇಟಿಯಾಗಿ ಜುಲೈ 18 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ತಮ್ಮ ಪಕ್ಷದ ಬೆಂಬಲವನ್ನು ಸೂಚಿಸಿದ್ದರು.
ಕಳೆದ ವಾರ, ರಾಜ್ಯಸಭಾ ಚುನಾವಣೆಗೆ ಸಂಬಂಧಿಸಿದಂತೆ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮುಂಬೈನಲ್ಲಿದ್ದಾಗ, ರಾಷ್ಟ್ರಪತಿ ಚುನಾವಣೆಗೆ ಪ್ರತಿಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಪವಾರ್ ಅವರ ಹೆಸರನ್ನು ಪ್ರಸ್ತಾಪಿಸಿದರು. ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯೊಂದಿಗೆ ಸಮಾಲೋಚನೆ ನಡೆಸಿದೆ ಎಂದು ಹೇಳಿದ್ದರು.
” ಪವಾರ್ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ ಎಂದು ನಾನು ಭಾವಿಸುವುದಿಲ್ಲ. ಸಾಹೇಬ್ (ಪವಾರ್) ಜನರನ್ನು ಭೇಟಿಯಾಗಲು ಇಷ್ಟಪಡುವ ಜನರ ವ್ಯಕ್ತಿ. ಅವರು ರಾಷ್ಟ್ರಪತಿ ಭವನಕ್ಕೆ ತನ್ನನ್ನು ಸೀಮಿತಗೊಳಿಸುವುದಿಲ್ಲ” ಎಂದು ಎನ್ಸಿಪಿಯ ಸಚಿವರು ಹೇಳಿದ್ದಾರೆ.